Home Crime ಪುತ್ತೂರು : ವಂಚನೆ ಪ್ರಕರಣ : ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳಿಗೆ ಶಿಕ್ಷೆ…!!

ಪುತ್ತೂರು : ವಂಚನೆ ಪ್ರಕರಣ : ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳಿಗೆ ಶಿಕ್ಷೆ…!!

ಪುತ್ತೂರು : ಸುಳ್ಯದಲ್ಲಿ ಶ್ರೀ ತತ್ವಮಸಿ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀ ತತ್ವಮಸಿ ಎಂಟರ್ ಪ್ರೈಸಸ್ ಎಂಬ ಸಂಸ್ಥೆ ಹೆಸರಿನಲ್ಲಿ ಬೆನಿಫಿಟ್ ಸ್ಕೀಂ ಪ್ರಾರಂಭಿಸಿ, ಸಾರ್ವಜನಿಕರಿಂದ ಕಂತುಗಳ‌ ಮೂಲಕ ಹಣ ಸಂಗ್ರಹಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳಿಗೆ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬೆನಿಫಿಟ್ ಸ್ಕೀಂ ಹೆಸರಿನಲ್ಲಿ ಪ್ರತಿ ತಿಂಗಳು ಏಜಂಟರ ಮೂಲಕ ಹಣ ಸಂಗ್ರಹಿಸುತ್ತಿದ್ದರು. ಸುಳ್ಯ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ ಒಟ್ಟು 4115 ಸದಸ್ಯರಿಂದ ಹಣ ಸಂಗ್ರಹಿಸಿ ಹಣವನ್ನಾಗಲೀ, ಯಾವುದೇ ವಸ್ತುವನ್ನಾಗಾಲಿ ನೀಡದೇ ರೂ ₹3,08,62,500/- ವಂಚನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ‌

ಆರೋಪಿಗಳಾದ ಶಿವಪ್ರಕಾಶ್, ಕೆ.ಪಿ. ಗಣೇಶ್, ಕೆ.ಪಿ. ಕೃಷ್ಣಪ್ಪ ಗೌಡ, ಗೀತಾ ಕೆ.ಎಸ್., ಭಾರತಿ, ಗೀತಾ ಗಣೇಶ್, ಎನ್.ಇ. ವೈ. ಕಮಲಾಕ್ಷ, ಕೆ. ನಾಗೇಶ ಎಂಬವರ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಸುಳ್ಯ ಪೊಲೀಸ್ ಠಾಣಾಧಿಕಾರಿ ಬ್ರಿಜೇಶ್ ಮ್ಯಾಥ್ಯೂರವರು ಪ್ರಕರಣದ ಭಾಗಶಃ ತನಿಖೆಯನ್ನು ನಡೆಸಿದ್ದು, ಚಂದ್ರಶೇಖರ್ ಹೆಚ್.ವಿ ಅವರು ತನಿಖೆಯನ್ನು ಪೂರ್ಣಗೊಳಿಸಿ ಸುಳ್ಯದ ಎಸ್.ಸಿಜೆ ಮತ್ತು ಜೆ‌ಎಂಎಫ್ ಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಸದ್ರಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಬಿ. ಮೋಹನ್ ಬಾಬು ಅವರ ಸಮಕ್ಷಮ ನಡೆದು 2025ರ ಅ.30ರಂದು ಪೂರ್ಣಗೊಳಿಸಿದ್ದು ಆರೋಪಿಗಳ ಪೈಕಿ ಕೆ.ಪಿ.ಗಣೇಶ್, ಗೀತಾ ಕೆ.ಎಸ್., ಭಾರತಿ ಅವರ ಅಪರಾಧ ಸಾಬೀತಾಗಿ ಅವರುಗಳನ್ನು ದೋಷಿ ಎಂದು ತೀರ್ಮಾನಿಸಿ ಉಳಿದ ಆರೋಪಿಗಳನ್ನು ಸಾಕ್ಷ್ಯ ಕೊರತೆಯಿಂದ ಖುಲಾಸೆಗೊಳಿಸಿ ಬಿಡುಗಡೆ ಮಾಡಿದ್ದರು. ಈ ನಡುವೆ, 1ನೇ ಆರೋಪಿ ಶಿವಪ್ರಕಾಶ್ ಮರಣ ಹೊಂದಿರುವುದರಿಂದ ಅವರ ಮೇಲಿನ ಪ್ರಕರಣ ಸ್ಥಗಿತಗೊಳಿಸಲಾಗಿದೆ.

ಇದೇ ನ.03ರಂದು ಶಿಕ್ಷೆಯ ಪ್ರಮಾಣವನ್ನು ನ್ಯಾಯಾಧೀಶರು ಘೋಷಣೆ ಮಾಡಿದ್ದು ಆರೋಪಿಗಳಾದ ಕೆಪಿ ಗಣೇಶ್, ಗೀತಾ ಕೆ.ಎಸ್, ಭಾರತಿ ಎಂಬವರಿಗೆ ಕಲಂ 406 ಸಹವಾಚಕ 149 ರಡಿಯಲ್ಲಿ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, ಕಲಂ 409 ಮತ್ತು 420 ರಡಿಯಲ್ಲಿ ಸಹವಾಚಕ 149 ರೊಂದಿಗೆ ಎರಡೂ ಕಲಂಗಳಿಗೆ ಆರೋಪಿಗಳಿಗೆ ಪ್ರತ್ಯೇಕವಾಗಿ 3 ವರ್ಷಗಳ ಕಾಲ ಸಾದಾ ಕಾರಾಗೃಹ ವಾಸ ಮತ್ತು ₹10,000/- ದಂಡ, ದಂಡ ಕಟ್ಟಲು ತಪ್ಪಿದ್ದಲ್ಲಿ 6 ತಿಂಗಳ ಹೆಚ್ಚುವರಿ ಸಾದಾ ಕಾರಾಗೃಹ ವಾಸ ವಿಧಿಸಲಾಗಿದೆ. ಮೇಲಿನ ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಗೊಳಿಸುವಂತೆ ಆದೇಶಿಸಲಾಗಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರಮೇಶ್ ವಾದ ಮಂಡಿಸಿರುತ್ತಾರೆ.