ಆದೇಶ ರದ್ದುಪಡಿಸಿದ ಹೈಕೋರ್ಟ್….
ಮಂಗಳೂರು : ಸಿ ಆರ್ ಪಿಸಿ ಸೆಕ್ಷನ್ 125ರಡಿ ಪತ್ನಿಗೆ ಜೀವನಾಂಶ ನೀಡಿದ್ದ ಆದೇಶ ಪಾಲನೆ ಮಾಡದ ಪತಿ ವಿರುದ್ಧ ಮಂಗಳೂರು ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಲುಕ್ ಔಟ್ ನೋಟಿಸ್ ಅನ್ನು ರದ್ದುಗೊಳಿಸಿರುವ ನ್ಯಾಯಾಲಯ, ಕೌಟುಂಬಿಕ ನ್ಯಾಯಾಲಯಕ್ಕೆ ಆ ರೀತಿ ಲುಕ್ ಔಟ್ ನೋಟಿಸ್ ನೀಡುವ ಯಾವುದೇ ಅಧಿಕಾರವಿಲ್ಲವೆಂದು ಮಹತ್ವದ ತೀರ್ಪು ನೀಡಿದೆ.
ಮಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಲಲಿತಾ ಕನ್ನೆಂಗಟ್ಟಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಲಯ, ಅರ್ಜಿದಾರ ಪತಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಿ 2 ಲಕ್ಷ ರೂಪಾಯಿ ಠೇವಣಿ ಇಡಬೇಕೆಂಬ ಷರತ್ತಿಗೆ ಒಳಪಟ್ಟು ಎಲ್ ಒಸಿ ಆದೇಶದ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿತು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ “ಯಾವುದೇ ಪ್ರಕರಣಗಳಲ್ಲಿ ನ್ಯಾಯಾಲಯ ಎಲ್ ಒಸಿ (ಲುಕ್ ಔಟ್ ಸರ್ಕ್ಯೂಲರ್) ರದ್ದುಗೊಳಿಸಿದರೆ ಅಂತಹ ಸಂದರ್ಭಗಳಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಅದನ್ನು ಬ್ಯೂರೋ ಆಫ್ ಇಮಿಗ್ರೇಷನ್ ಗೆ ಮಾಹಿತಿ ನೀಡಬೇಕು ಮತ್ತು ಯಾವ ಅಧಿಕಾರಿ ಆ ಎಲ್ ಒಸಿಯನ್ನು ಜಾರಿಗೊಳಿಸುತ್ತಾರೋ ಅಂತಹವರಿಗೆ ಹೊಣೆಗಾರಿಕೆ ನಿಗಡಿಪಡಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದೆ. ಅಲ್ಲದೆ ಒಂದು ವೇಳೆ ಆ ಅಧಿಕಾರಿ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡದಿದ್ದರೆ ಅವರ ವಿರುದ್ಧ ಇಲಾಖಾ ಶಿಸ್ತು ಕ್ರಮ ಜರುಗಿಸಬೇಕು” ಎಂದೂ ನ್ಯಾಯಪೀಠ ಆದೇಶಿಸಿದೆ.
“ಸಿಆರ್ ಪಿಸಿ ಸೆಕ್ಷನ್ 125ರಡಿ ಕೌಟುಂಬಿಕ ನ್ಯಾಯಾಲಯಕ್ಕೆ ಎಲ್ ಒಸಿ ಹೊರಡಿಸಿರುವ ಯಾವುದೇ ಅಧಿಕಾರವಿಲ್ಲ. ಜೀವನಾಂಶ ನೀಡುವ ಕುರಿತಾದ ಸೆಕ್ಷನ್ 125 ಅನ್ನು ನ್ಯಾಯಾಲಯ ಇತರೆ ಆದೇಶಗಳ ಮೂಲಕ ಜಾರಿಗೊಳಿಸಬಹುದು. ಒಂದು ವೇಳೆ ಪತಿ ಜೀವನಾಂಶ ನೀಡಲು ವಿಫಲರಾದರೆ ಅವರಿಗೆ ದಂಡ ವಿಧಿಸಲು ಅವಕಾಶವಿದೆ. ಜತೆಗೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ನೀಡಬಹುದು. ಇಲ್ಲವೇ ಬಂಧಿಸಲು ಆದೇಶಿಸಲೂಬಹುದು. ಜೀವನಾಂಶ ರಿಕವರಿಗೆ ಲುಕ್ ಔಟ್ ಆದೇಶ ಹೊರಡಿಸಲಾಗದು. ಅದಕ್ಕೆ ಅಧಿಕಾರವೂ ಇಲ್ಲ” ಎಂದೂ ನ್ಯಾಯಾಲಯ ಹೇಳಿದೆ.
ಅಲ್ಲದೆ, ಈ ಆದೇಶದ ಪ್ರತಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಬೇಕು. ಅವರು ಸಿಆರ್ ಪಿಸಿ ಸೆಕ್ಷನ್ 125 ರ ಆದೇಶಗಳನ್ನು ಜಾರಿ ಮಾಡುವಾಗ ಈ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಸೂಕ್ತ ಸುತ್ತೋಲೆ ಹೊರಡಿಸಬೇಕೆಂದು ತಿಳಿಸಲಾಗಿದೆ.



