ಉಡುಪಿ: ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹೈಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜೈಲಿನಲ್ಲಿರುವ ಭೂಗತ ಪಾತಕಿ ಬನ್ನಂಜೆ ರಾಜನನ್ನು ಪೊಲೀಸರು ಇಂದು (ರವಿವಾರ) ಪೆರೋಲ್ನಲ್ಲಿ ಉಡುಪಿಗೆ ಕರೆತಂದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ
ಎ.27ರಂದು ನಿಧನರಾದ ತಂದೆ ಎಂ.ಸುಂದರ್(88) ಅವರ ಅಂತಿಮ ಸಂಸ್ಕಾರ ಹಾಗೂ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತುರ್ತು ಪೆರೋಲ್ ನೀಡುವಂತೆ ಬನ್ನಂಜೆ ರಾಜ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದನು. ಈ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್, ಆತನಿಗೆ ಕೆಲವೊಂದು ಶರ್ತಗಳನ್ನು ವಿಧಿಸಿ ಮೇ 3ರಿಂದ ಮೇ 14ರವರೆಗೆ ಪೆರೋಲ್ ನೀಡಿದೆ ಎಂದು ತಿಳಿಯಲಾಗಿದೆ.
ಅದರಂತೆ ಪೊಲೀಸರು ಆತನನ್ನು ಇಂದು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಲ್ಪೆ ಕಲ್ಮಾಡಿಯ ಸಸಿತೋಟ ಎಂಬಲ್ಲಿರುವ ಆತನ ಮನೆಗೆ ಕರೆದುಕೊಂಡು ಬಂದಿದ್ದು, ಅಲ್ಲಿ ಆತ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿ ದನು. ಬಳಿಕ ಮಲ್ಪೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ
ಭೂಗತನಾಗಿದ್ದ ಬನ್ನಂಜೆ ರಾಜನನ್ನು 2015ರ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾದ ಮೊರಕ್ಕೊದಲ್ಲಿ ಪೊಲೀಸರು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದರು. ಕಾರವಾರ ಕೊಲೆ ಪ್ರಕರಣ, ಉಡುಪಿ ಐರೋಡಿ ಜ್ಯುವೆಲ್ಲರ್ಸ್ ಶೂಟೌಟ್ ಸೇರಿ ದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಬನ್ನಂಜೆ ರಾಜ, ಒಟ್ಟು 23 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಳೆದ 10 ವರ್ಷಗಳಿಂದ ಬೆಳಗಾವಿಯ ಜೈಲಿನಲ್ಲಿದ್ದಾನೆ.
“ಪೆರೋಲ್ನಲ್ಲಿ ಬಿಡುಗಡೆಯಾಗಿರುವ ಬನ್ನಂಜೆ ರಾಜಾ, ಈ ಅವಧಿಯಲ್ಲಿ ಸಹಚರರರೊಂದಿಗೆ ಸೇರಿ ಯಾವುದೇ ಕೃತ್ಯದಲ್ಲಿ ಭಾಗಿಯಾಗುವಂತಿಲ್ಲ. ಮೊಬೈಲ್, ಇಂಟರ್ನೆಟ್ ಬಳಸುವಂತಿಲ್ಲ. ಮನೆ ಬಿಟ್ಟು ಹೊರಗೆ ಹೋಗು ವಂತಿಲ್ಲ. ತಂದೆಯ ಅಂತ್ಯಸಂಸ್ಕಾರದಲ್ಲಿ ಮಾತ್ರ ಭಾಗಿಯಾಗಬೇಕು ಸೇರಿದಂತೆ ಹಲವು ಷರತ್ತುಗಳನ್ನು ಹೈಕೋರ್ಟ್ ವಿಧಿಸಿದೆ. ಮೇ 14ರಂದು ಆತನನ್ನು ಮತ್ತೆ ಬೆಳಗಾವಿ ಜೈಲಿಗೆ ಕರೆದೊಯ್ಯಲಾಗುವುದು” ಎಂದು ಡಾ.ಕೆ. ಅರಣ್ ಉಡುಪಿ ಎಸ್ಪಿ ತಿಳಿಸಿದ್ದಾರೆ.