Home Crime ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಅರೆಸ್ಟ್…!!

ಮಂಗಳೂರಿನಲ್ಲಿ ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದ ಮಲಯಾಳಂ ನಟ ಜಯಕೃಷ್ಣನ್ ಅರೆಸ್ಟ್…!!

ಮಂಗಳೂರು : ಕ್ಯಾಬ್ ಚಾಲಕನಿಗೆ ಟೆರರಿಸ್ಟ್ ಎಂದು ನಿಂದಿಸಿದ ಆರೋಪದ ಹಿನ್ನೆಲೆ ಮಲಯಾಳಂ ಚಿತ್ರರಂಗದ ಹಿರಿಯ ನಟ ಜಯಕೃಷ್ಣನ್ ಅವರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ. ಜಯಕೃಷ್ಣನ್ ಸೇರಿ ಮೂವರ ಮೇಲೆ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಟನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಯ ಹಿನ್ನೆಲೆ ಜಯಕೃಷ್ಣನ್, ಸಂತೋಷ್ ಮತ್ತು ವಿಮಲ್ ಮಂಗಳೂರಿಗೆ ಆಗಮಿಸಿದ್ದರು. ಇಲ್ಲಿ ಓಡಾಡಲು ಉಬರ್ ಬುಕ್ ಮಾಡಿದ್ದರು. ಉಬರ್ ಕ್ಯಾಬ್ ಚಾಲಕ ಶಫೀಕ್‌ ಅಹ್ಮದ್‌ ಕರೆ ಮಾಡಿ ಎಲ್ಲಿಗೆ ಬರಬೇಕು ಎಂದು ಕೇಳಿದರು. ಅದಕ್ಕೆ ಜಯಕೃಷ್ಣನ್ ಮತ್ತು ಸ್ನೇಹಿತರು ಮೊದಲು ಹಿಂದಿಯಲ್ಲಿ ಮಾತನಾಡಿದ್ದರು. ಶಫೀಕ್ ಕನ್ನಡದಲ್ಲಿ ಮಾತನಾಡಿದಾಗ, ಮಲಯಾಳಂನಲ್ಲಿ ಮಾತನಾಡುವಂತೆ ಜಯಕೃಷ್ಣನ್ ಸೂಚಿಸಿದ್ದರು ಎನ್ನಲಾಗಿದೆ. ಈ ವೇಳೆ ಜಯಕೃಷ್ಣನ್‌ ತನ್ನನ್ನು ಮುಸ್ಲಿಂ ತೀವ್ರವಾದಿ, ಟೆರರಿಸ್ಟ್ ಎಂದು ಅಪಹಾಸ್ಯ ಮಾಡಿದ್ದಾರೆ ಎಂದು ಶಫೀಕ್‌ ಅಹ್ಮದ್‌ ಆರೋಪಿಸಿದ್ದಾರೆ. ಅನೇಕ ಕ್ಯಾಬ್ ಚಾಲಕರಿಗೂ ಜಯಕೃಷ್ಣನ್ ಇದೇ ರೀತಿ ಆಟ ಆಡಿಸಿದ್ದಾರೆ ಎನ್ನಲಾಗಿದೆ. ಐಪಿಸಿ ಸೆಕ್ಷನ್ 352, 353(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಜಯಕೃಷ್ಣನ್‌ನನ್ನು ಉರ್ವ ಠಾಣೆ ಪೊಲೀಸರು ಬಂಧಿಸಿದ್ದಾರೆ.

51 ವರ್ಷದ ಜಯಕೃಷ್ಣನ್‌ ಮಾಲಿವುಡ್‌ನ ಜನಪ್ರಿಯ ಪೋಷಕ ನಟ ಎನಿಸಿಕೊಂಡಿದ್ದಾರೆ. ಮಲಯಾಳಂ ಕಿರುತೆರೆಯಲ್ಲಿಯೂ ನಟಿಸಿದ್ದಾರೆ. 1994ರಲ್ಲಿ ತೆರೆಕಂಡ ಹಬೆಲಿಂಡೆ ವಯಲುಗಳ್‌ ಚಿತ್ರದ ಮೂಲಕ ಸಿನಿರಂಗ ಪ್ರವೇಶಿಸಿದರು. ಅದಾದ ಬಳಿಕ 30 ವರ್ಷಗಳ ಕಾಲ ನಿರಂತರವಾಗಿ ಅಭಿನಯಿಸುತ್ತಲೇ ಬಂದಿದ್ದಾರೆ. ತಮಿಳು ಕಿರುತೆರೆಯಲ್ಲಿಯೂ ನಟಿಸಿದ್ದಾರೆ.