Home Karavali Karnataka ಪುತ್ತೂರು : 6 ತಿಂಗಳ ಹಿಂದೆ ನಡೆದ ರಸ್ತೆ ಅಪಘಾತ : 134 ದಿನಗಳ ಜೀವನ್ಮರಣ...

ಪುತ್ತೂರು : 6 ತಿಂಗಳ ಹಿಂದೆ ನಡೆದ ರಸ್ತೆ ಅಪಘಾತ : 134 ದಿನಗಳ ಜೀವನ್ಮರಣ ಹೋರಾಟದ ಬಳಿಕ ಉಸಿರು ನಿಲ್ಲಿಸಿದ ಅಪೂರ್ವ ಕೆ. ಭಟ್….!!

ಪುತ್ತೂರು : 6 ತಿಂಗಳ ಹಿಂದೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿನ ತಿರುವಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಕೆದಿಲ ನಿವಾಸಿ ಅಪೂರ್ವ ಕೆ. ಭಟ್ (32) ಚಿಕಿತ್ಸೆ ಫಲಿಸದೆ ಅ.7ರ ರಾತ್ರಿ ನಿಧನರಾದರು.

ಮೇ 27ರಂದು ಪುತ್ತೂರಿನ ಹೊರವಲಯದ ಮುರ ಜಂಕ್ಷನ್ ಬಳಿ ಈ ದುರ್ಘಟನೆ ನಡೆದಿತ್ತು. ಮಾಣಿ-ಮೈಸೂರು ಹೆದ್ದಾರಿಯಲ್ಲಿ ಪುತ್ತೂರು ಪೇಟೆಯಿಂದ ತಮ್ಮ ತಂದೆ ಈಶ್ವರ್ ಭಟ್ ಅವರ ಜತೆ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ, ಪಡ್ನೂರಿಗೆ ತಿರುಗುವ ಒಳರಸ್ತೆಯಲ್ಲಿ ಈ ಘಟನೆ ಸಂಭವಿಸಿತ್ತು. ಪುತ್ತೂರಿನಿಂದ ಮಂಗಳೂರಿನತ್ತ ವೇಗವಾಗಿ ಚಲಿಸುತ್ತಿದ್ದ ಖಾಸಗಿ ಬಸ್, ಅಪೂರ್ವ ಅವರ ತಂದೆ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಕಾರು ಹಲವು ಮೀಟರ್ ದೂರಕ್ಕೆ ಎಸೆಯಲ್ಪಟ್ಟು ನುಜ್ಜುಗುಜ್ಜಾಗಿತ್ತು.

ಅಪಘಾತದಲ್ಲಿ ಕಾರು ಚಲಾಯಿಸುತ್ತಿದ್ದ ಈಶ್ವರ್ ಭಟ್ ಮತ್ತು ಅಪೂರ್ವ ಅವರ ಪುಟ್ಟ ಮಗಳು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದರು. ಆದರೆ ಅಪೂರ್ವ ಅವರ ಸ್ಥಿತಿ ಗಂಭೀರವಾಗಿತ್ತು. 134 ದಿನಗಳ ಕಾಲ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಅಪೂರ್ವ ಅವರ ಪತಿ ಆಶೀಶ್ ಸಾರಡ್ಕ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿದ್ದು, ಈ ಅಪಘಾತದ ಬಗ್ಗೆ ಫೇಸ್ ಬುಕ್‌ನಲ್ಲಿ ಹಂಚಿಕೊ0ಡಿದ್ದರು. ಇದಕ್ಕೆ ಪ್ರತಿಕ್ರಿಯಿಸುತ್ತಿದ್ದ ಸಾವಿರಾರು ಫೇಸ್ ಬುಕ್ ಬಳಕೆದಾರರು ಅಪೂರ್ವ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದರು. ಆದರೆ ಯಾರ ಪ್ರಾರ್ಥನೆಯೂ ಫಲಿಸದೇ ಅಪೂರ್ವ ಇಹಲೋಕ ತ್ಯಜಿಸಿದ್ದಾರೆ. ಪತಿ, ಪುಟ್ಟ ಮಗಳು ಹಾಗೂ ತಂದೆ ತಾಯಿ, ಅತ್ತೆ ಮಾವನನ್ನು ಅಪೂರ್ವ ಅಗಲಿದ್ದಾರೆ.