Home Karavali Karnataka ಪುತ್ತೂರು: ಪತ್ನಿ ಕೊಲೆಯಾಗಿದ್ದಾಳೆ ಎಂಬ ಕನಸನ್ನೇ ನಿಜವೆಂದು ನಂಬಿ ಠಾಣೆಗೆ ಬಂದ ವೃದ್ಧ…!!

ಪುತ್ತೂರು: ಪತ್ನಿ ಕೊಲೆಯಾಗಿದ್ದಾಳೆ ಎಂಬ ಕನಸನ್ನೇ ನಿಜವೆಂದು ನಂಬಿ ಠಾಣೆಗೆ ಬಂದ ವೃದ್ಧ…!!

ಘಟನಾ ಸ್ಥಳಕ್ಕೆ ಹೋದಾಗ “ಮೃತ’ ಮಹಿಳೆಯಿಂದಲೇ ಪೊಲೀಸರಿಗೆ ಸ್ವಾಗತ…..

ಪುತ್ತೂರು: ನನ್ನ ಪತ್ನಿಯನ್ನು ಮಗನೇ ಕೊಂದಿದ್ದಾನೆ ಎಂದು ಬೆಳ್ಳಂಬೆಳ್ಳಗೆ ವೃದ್ಧನೊಬ್ಬ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದು ಇದನ್ನು ನಂಬಿ ಆತನ ಮನೆಗೆ ತೆರಳಿದ್ದ ಪೊಲೀಸರು ಅಲ್ಲಿನ ದೃಶ್ಯ ಕಂಡು ದಂಗಾದ ಘಟನೆ ಪುತ್ತೂರಿನ ಬೆಳಿಯೂರುಕಟ್ಟೆ ಸಮೀಪ ನಡೆದಿದೆ.

ಬೆಳಿಯೂರುಕಟ್ಟೆ ನಿವಾಸಿ ವೃದ್ಧರೊಬ್ಬರು ಪುತ್ತೂರು ಗ್ರಾಮಾಂತರ ಠಾಣೆಗೆ ಬಂದು ನನ್ನ ಪತ್ನಿಯನ್ನು ಮಗನೇ ಕೊಂದಿರುವುದಾಗಿ ದೂರು ನೀಡಿದರು. ತತ್‌ಕ್ಷಣ ಪೊಲೀಸರು ವೃದ್ಧನ ಮನೆಗೆ ಹೊರಟರು. ದಾರಿ ಮಧ್ಯೆ ಅಕ್ಕಪಕ್ಕದ ಮನೆಯವರನ್ನು ಕರೆಸಿ ವಿಚಾರಿಸಿದರು. ಅವರೂ ಕೂಡ ಕೊಲೆ ನಡೆದಿರುವುದಾಗಿ ವೃದ್ಧ ಹೇಳಿದ್ದಾರೆ ಎನ್ನುವ ಮಾಹಿತಿ ನೀಡಿದರು.

ಅಷ್ಟೊತ್ತಿಗೆ ಕೊಲೆ ನಡೆದಿರುವ ವಿಚಾರ ಊರೆಲ್ಲ ಹರಡಿತ್ತು.ಘಟನ ಸ್ಥಳಕ್ಕೆ ತಲುಪಿದ ಪೊಲೀಸರು ಮನೆಯ ಬಾಗಿಲು ತಟ್ಟಿದರು. ಕೊಲೆಯಾಗಿದ್ದಾರೆ ಎಂದು ಹೇಳಿದ್ದ ಮಹಿಳೆಯೇ ಮುಗುಳು ನಗುತ್ತಾ ಬಾಗಿಲು ತೆರೆದು ಸ್ವಾಗತಿಸಿದಾಗ ಪೊಲೀಸರು ದಂಗಾಗಿ ಹೋದರು. ಕೊನೆಗೆ ವೃದ್ಧನ ಪುತ್ರ ಸ್ಥಳಕ್ಕೆ ದೌಡಾಯಿಸಿ ವಾಸ್ತವ ಸಂಗತಿ ಹೇಳಿ ಪ್ರಕರಣ ಸುಖಾಂತ್ಯಗೊಳಿಸಿದರು.

ಕನಸನ್ನು ನಿಜ ಎಂದು ನಂಬಿದ್ದರು! ಅಸಲಿಗೆ ಈ ವೃದ್ಧನಿಗೆ ರಾತ್ರಿ ಮಗನೇ ತಾಯಿಯನ್ನು ಕೊಲೆ ಮಾಡುತ್ತಿರುವಂತೆ ಕನಸು ಬಿದ್ದಿತ್ತು. ಬೆಳಗ್ಗೆ ಎಚ್ಚರಗೊಂಡ ಬಳಿಕವೂ ಪತ್ನಿ ಕೊಲೆಯಾಗಿದ್ದಾಳೆ ಎನ್ನುವ ಭ್ರಮೆಯಿಂದ ವೃದ್ಧ ಹೊರಬಂದಿರಲಿಲ್ಲ. ಮನೆಯಲ್ಲಿ ಪತ್ನಿ ಇದ್ದಾಳ್ಳೋ ಎನ್ನುವುದನ್ನು ಪರಿಶೀಲಿಸದೆ ಪಕ್ಕದ ಮನೆಗೆ ತೆರಳಿ ನನ್ನ ಹೆಂಡತಿಯನ್ನು ಮಗನೇ ಮುಗಿಸಿಬಿಟ್ಟ ಎಂದು ಗೋಳಾಡಿದ್ದರು. ಗಾಬರಿಗೊಂಡ ಮನೆ ಮಂದಿ ಆತನನ್ನು ಸಂಪ್ಯ ಪೊಲೀಸ್‌ ಠಾಣೆಗೆ ಕಳುಹಿಸಿಕೊಟ್ಟರು ಎನ್ನಲಾಗಿದೆ. ವೃದ್ಧ ಹಲವು ಸಮಯದಿಂದ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.