ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಮಹಿಳೆಗೆ ಮಾರಕಾಸ್ತ್ರ ತೋರಿಸಿ ಬೆದರಿಸಿ ಮೂರು ದನಗಳನ್ನು ಕಳ್ಳತನ ಮಾಡಿದ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ರವಿವಾರ (ಸೆ.28) ತಡರಾತ್ರಿ ಸಂಭವಿಸಿದೆ.
ಶಿರ್ಲಾಲಿನ ಜಯಶ್ರೀ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಹಟ್ಟಿಗೆ ಕನ್ನಹಾಕಿದ ದೃಷ್ಠರು ಮೂರು ದನಗಳನ್ನು ಕದ್ದೊಯ್ದಿದ್ದಾರೆ.
ರಾತ್ರಿ ಮಹಿಳೆಯು ಮನೆಯಲ್ಲಿ ಒಂಟಿಯಾಗಿದ್ದಾಗ ವಾಹನವೊಂದರಲ್ಲಿ ದುಷ್ಟರು ಬಂದಿದ್ದು, ಈ ವೇಳೆ ಶಬ್ದಕ್ಕೆ ಎಚ್ಚೆತ್ತ ಮಹಿಳೆ ಹೊರಗೆ ಬಂದಾಗ ಮಾರಕಾಸ್ತ್ರಗಳನ್ನು ತೋರಿಸಿ ಆಕೆಯನ್ನು ಬೆದರಿಸಿ ದನಗಳನ್ನು ಕೊಂಡೊಯ್ದಿದ್ದಾರೆ.
ಈ ಘಟನೆ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.