ಕುಂದಾಪುರ: ಈಗಾಗಲೇ ಬ್ಯಾಂಕ್ನಲ್ಲಿ ಸಾಲ ಪಡೆದಿದ್ದ ಮನೆಯನ್ನು, ಆ ವಿಷಯವನ್ನು ಸಂಪೂರ್ಣವಾಗಿ ಮರೆಮಾಚಿ ಗ್ರಾಹಕರೊಬ್ಬರಿಗೆ ಮಾರಾಟ ಮಾಡಿ ವಂಚಿಸಿರುವ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.
ವಂಚನೆಗೊಳಗಾದ ಗ್ರಾಹಕರು ನೀಡಿದ ದೂರಿನನ್ವಯ ದಂಪತಿಗಳಿಬ್ಬರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.
ಕುಂದಾಪುರ ಕಸಬಾ ಗ್ರಾಮದ ಚಿಕನ್ ಸಾಲ್ ರಸ್ತೆಯ ನಿವಾಸಿ ಶ್ರೀನಾಥ್ (50) ಎಂಬುವವರು ಆರೋಪಿಗಳಾದ ಉದಯ ಮೆಂಡನ್ ಮತ್ತು ನಿರ್ಮಲಾ ಯು. ಮೆಂಡನ್ ದಂಪತಿಯಿಂದ ವಡೇರಹೋಬಳಿ ಗ್ರಾಮದ ಸರ್ವೆ ನಂ. 161/1F, 161/16 ಹಾಗೂ 161/1H ವ್ಯಾಪ್ತಿಯ ಒಟ್ಟು 4.5 ಸೆಂಟ್ಸ್ ಜಾಗದಲ್ಲಿದ್ದ ಮನೆಯನ್ನು ಖರೀದಿಸಿದ್ದರು.
ಕಳೆದ 2021ರ ಆಗಸ್ಟ್ 12 ರಂದು ಕುಂದಾಪುರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ 20.75 ಲಕ್ಷ ರೂಪಾಯಿ ನೀಡಿ ಈ ಆಸ್ತಿಯನ್ನು ತಮ್ಮ ಹೆಸರಿಗೆ ಕ್ರಯಪತ್ರ (ಸೇಲ್ ಡೀಡ್) ಮಾಡಿಸಿಕೊಂಡಿದ್ದರು.
ಬೆಳಕಿಗೆ ಬಂದ ವಂಚನೆ: ಆದರೆ, ಆರೋಪಿ ದಂಪತಿಗಳು ಈ ಆಸ್ತಿಯನ್ನು ಶ್ರೀನಾಥ್ ಅವರಿಗೆ ಮಾರಾಟ ಮಾಡುವ ಮೊದಲೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಕುಂದಾಪುರ ಶಾಖೆಯಲ್ಲಿ ಗೃಹ ಸಾಲ (ಹೋಮ್ ಲೋನ್) ಪಡೆದುಕೊಂಡಿದ್ದರು. ಸಾಲವನ್ನು ಮರುಪಾವತಿಸದೇ ಬಾಕಿ ಉಳಿಸಿಕೊಂಡಿದ್ದರಿಂದ, ಇತ್ತೀಚೆಗೆ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗಾಗಿ ಸದರಿ ಮನೆಗೆ ನೋಟಿಸ್ ಅಂಟಿಸಿದಾಗ ಈ ಮಹಾ ವಂಚನೆ ಬೆಳಕಿಗೆ ಬಂದಿದೆ. ಬ್ಯಾಂಕ್ ಋಣಭಾರದಲ್ಲಿದ್ದ ಆಸ್ತಿಯನ್ನು ತಮಗೆ ಮಾರಾಟ ಮಾಡಿ, ನಂಬಿಕೆ ದ್ರೋಹ ಹಾಗೂ ಮೋಸ ಎಸಗಿದ್ದಾರೆ ಎಂದು ಸಂತ್ರಸ್ತ ಶ್ರೀನಾಥ್ ಪೊಲೀಸರಿಗೆ ದೂರು ನೀಡಿದ್ದಾರೆ.
ಸದ್ಯ ಸಂತ್ರಸ್ತನ ದೂರಿನ ಮೇರೆಗೆ ಕುಂದಾಪುರ ಠಾಣಾ ಪೊಲೀಸರು ಆರೋಪಿಗಳ ವಿರುದ್ಧ ಅಪರಾಧ ಕ್ರಮಾಂಕ 46/2026, ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 314, 316, 318, 322 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




