Home Crime ಉಪ್ಪುಂದ ಮೀನುಗಾರರ ಸಹಕಾರ ಸಂಘದಲ್ಲಿ ಕೋಟಿ ರೂ. ಅವ್ಯವಹಾರ ಆರೋಪ : ಪ್ರಕರಣ ದಾಖಲು…!!

ಉಪ್ಪುಂದ ಮೀನುಗಾರರ ಸಹಕಾರ ಸಂಘದಲ್ಲಿ ಕೋಟಿ ರೂ. ಅವ್ಯವಹಾರ ಆರೋಪ : ಪ್ರಕರಣ ದಾಖಲು…!!

ಬೈಂದೂರು, ಮೇ 22: ಉಪ್ಪುಂದ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದಲ್ಲಿ ಸುಮಾರು ₹1.10 ಕೋಟಿ ಹಣದ ಅವ್ಯವಹಾರ ಹಾಗೂ ಬೆದರಿಕೆ ಆರೋಪ ಸಂಬಂಧ ಪ್ರಕರಣ ದಾಖಲಾಗಿದೆ.

ಸುಭಾಶ್ಚಂದ್ರ (40), ನಾವುಂದ ಗ್ರಾಮದ ನಿವಾಸಿಯಾಗಿದ್ದು, ಉಪ್ಪುಂದ ಕರಾವಳಿ ಸಾಂಪ್ರದಾಯಿಕ ಮೀನುಗಾರರ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೂರಿನ ಪ್ರಕಾರ, 2018-19ರಿಂದ 2022-23ರವರೆಗೆ ಸಂಘದ ಅಧ್ಯಕ್ಷರಾಗಿದ್ದ ಮೋಹನ ಚಂದ್ರ ಹಾಗೂ ಈಗಿನ ಅಧ್ಯಕ್ಷ ನಾಗೇಶ್ ಖಾರ್ವಿ ಅವರು ಸಹಕಾರ ಕಾನೂನಿಗೆ ವಿರುದ್ಧವಾಗಿ ಸುಮಾರು ₹1 ಕೋಟಿ 10 ಲಕ್ಷ ಹಣವನ್ನು ಕುಂದಾಪುರದ ಸೌಹಾರ್ದ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದರು ಎನ್ನಲಾಗಿದೆ.

ನಂತರ ಆ ಸೌಹಾರ್ದ ಸೊಸೈಟಿ ಮುಚ್ಚಲ್ಪಟ್ಟ ಪರಿಣಾಮ ಸಂಘಕ್ಕೆ ಭಾರೀ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಣದ ವಸೂಲಾತಿ ಕುರಿತು ಸುಭಾಶ್ಚಂದ್ರ ಮತ್ತು ಮ್ಯಾನೇಜರ್ ದೀಪಕ್ ಕುಮಾರ್ ಅವರು ಅಧ್ಯಕ್ಷ ನಾಗೇಶ್ ಖಾರ್ವಿ ಅವರನ್ನು ಪ್ರಶ್ನಿಸಿದ್ದರಿಂದ ಸಂಘದಲ್ಲಿ ಎರಡು ಗುಂಪುಗಳಾಗಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ.

ದಿನಾಂಕ 26/12/2023 ರಂದು ಸಂಜೆ ವೇಳೆ ಆರೋಪಿಗಳು ಸುಭಾಶ್ಚಂದ್ರ ಹಾಗೂ ಮ್ಯಾನೇಜರ್ ದೀಪಕ್ ಕುಮಾರ್ ಅವರನ್ನು ಸೊಸೈಟಿ ಸಭಾಂಗಣಕ್ಕೆ ಕರೆಯಿಸಿಕೊಂಡು, “ನಿಮ್ಮಿಬ್ಬರನ್ನೂ ಕೆಲಸದಿಂದ ತೆಗೆದುಹಾಕುತ್ತೇವೆ” ಎಂದು ಬೆದರಿಕೆ ಹಾಕಿ, ತಾವು ಹೇಳಿದಂತೆ ಸ್ಟಾಂಪ್ ಪೇಪರ್‌ನಲ್ಲಿ ಬರೆದು ಕೊಡಿಸುವ ಮೂಲಕ ಭಾರೀ ಮೊತ್ತದ ಹಣ ಮರುಪಾವತಿಗೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದಲ್ಲದೆ, ಸಂಸ್ಥೆಗೆ ಸಂಬಂಧಿಸಿದ ಅಮೂಲ್ಯ ಲೆಕ್ಕಪತ್ರಗಳ ಡೈರಿ ಹಾಗೂ ಪ್ರಮುಖ ದಾಖಲೆಗಳನ್ನು ಸಹ ತೆಗೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಮಾನ್ಯ ನ್ಯಾಯಾಲಯದ ಆದೇಶದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.