ಕಾರ್ಕಳ: ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಆನಂದನಗರದಲ್ಲಿ ಮನೆ ಕಳ್ಳತನ ಪ್ರಕರಣ ವರದಿಯಾಗಿದೆ.
ಹರೀಶ್ ಶೆಟ್ಟಿ (46) ಅವರು ಉಜಿರೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಏಪ್ರಿಲ್ 16ರಂದು ಬೆಳಿಗ್ಗೆ 06:45ಕ್ಕೆ ತಮ್ಮ ವಾಸದ ಮನೆಯನ್ನು ಬೀಗ ಹಾಕಿ ತೆರಳಿದ್ದರು. ಬಳಿಕ ದಿನಾಂಕ 19/04/2026 ರಂದು ಬೆಳಿಗ್ಗೆ ಸಂಬಂಧಿಕರು ಮನೆ ಬಾಗಿಲು ಒಡೆದಿರುವುದಾಗಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಅಪರಿಚಿತ ಕಳ್ಳರು 16/04/2026 ರಿಂದ 19/04/2026 ರ ನಡುವಿನ ಅವಧಿಯಲ್ಲಿ ಮನೆಯ ಮುಖ್ಯ ಬಾಗಿಲನ್ನು ಯಾವುದೋ ಸಾಧನ ಬಳಸಿ ಒಡೆದು ಒಳನುಗ್ಗಿ, ಕಪಾಟಿನ ಬೀಗ ಮುರಿದು ಒಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ನಂತರ ಮನೆಯೊಳಗಿದ್ದ KA-20-ES-8541 ನಂಬರಿನ ಸ್ಕೂಟಿಯ ಕೀಯನ್ನು ಪಡೆದು, ಮನೆಯ ಹೊರಗಡೆ ನಿಲ್ಲಿಸಿದ್ದ ಅದೇ ಸ್ಕೂಟಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





