ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿ ಸಮೀಪ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಮೃತಪಟ್ಟಿದ್ದು,ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ಹೆಬ್ರಿ ಸಮೀಪ ನಡೆದಿದೆ.
ತಿಮ್ಮಪ್ಪ ನಾಯಕ್ (46), ಕನ್ಯಾನ ಗ್ರಾಮದವರು ನೀಡಿದ ದೂರಿನ ಪ್ರಕಾರ, ಏಪ್ರಿಲ್ 10 ರಂದು ಬೆಳಗ್ಗೆ ಸುಮಾರು 11:30 ಗಂಟೆ ಸುಮಾರಿಗೆ ಅವರು ಶಾಲೆ ಗೇಟ್ ಬಳಿ ನಿಂತುಕೊಂಡಿದ್ದರು. ಈ ವೇಳೆ ಉಡುಪಿ ಕಡೆಯಿಂದ ಬಂದ ಬಸ್ಸಿನಿಂದ ಇಳಿದ ವಿದ್ಯಾರ್ಥಿನಿಯಾದ ಅರ್ಪಣಾ ಮತ್ತು ಆಕೆಯ ಸಂಬಂಧಿ ಪ್ರೀತಿ ಆಚಾರ್ಯ ಅವರು ರಸ್ತೆ ದಾಟಲು ಮುಂದಾಗಿದ್ದರು.
ಈ ಸಂದರ್ಭದಲ್ಲಿ ಉಡುಪಿ ಕಡೆಯಿಂದ ರಾಂಗ್ ಸೈಡ್ನಲ್ಲಿ ಬಂದ ಮಿನಿ ಗೂಡ್ಸ್ ವಾಹನವನ್ನು ಚಾಲಕ ನಾರಾಯಣಪ್ಪ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಇಬ್ಬರಿಗೂ ಡಿಕ್ಕಿ ಹೊಡೆದಿದ್ದಾನೆ.
ಡಿಕ್ಕಿ ಪರಿಣಾಮವಾಗಿ ಇಬ್ಬರೂ ರಸ್ತೆಗೆ ಬಿದ್ದು, ತಲೆ ಹಾಗೂ ಕಾಲು ಭಾಗಗಳಿಗೆ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೀತಿ ಆಚಾರ್ಯ ಮೃತಪಟ್ಟಿದ್ದಾರೆ.ವಿದ್ಯಾರ್ಥಿನಿ ಅಪರ್ಣಾ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





