ಮಂಗಳೂರು: ನಮ್ಮ ಮಗನ ಸಾವಿಗೆ ಆತನ ಪತ್ನಿ ನೀಡಿರುವ ಮಾನಸಿಕ ಹಿಂಸೆ, ಕಿರುಕುಳ ಹಾಗೂ ಆಹಾರದಲ್ಲಿ ವಿಷ ನೀಡಿರುವುದು ಕಾರಣವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು’ ಎಂದು ಇತ್ತೀಚೆಗೆ ಸಾವಿಗೀಡಾಗಿರುವ ಸುದೀಪ್ ರೈ ಅವರ ಪೋಷಕರು ಆಗ್ರಹಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಉನ್ನತ ತನಿಖೆಗೆ ಒತ್ತಾಯಿಸಿದ ಮೃತ ಸುದೀಪ್ ರೈ ತಂದೆ ಬಿ. ದಾಮೋದರ ನೆಲ್ಯಾಡಿ, ‘ಮಗನ ಸಾವಿಗೆ ಮಾ. 17ರಂದು ಆತನ ಪತ್ನಿ ನೆಲ್ಯಾಡಿ ಪೇಟೆಯಲ್ಲಿ ನಡೆಸಿದ ಗಲಾಟೆಯೇ ಮುಖ್ಯ ಕಾರಣಾಗಿದೆ. ನಂತರ ಆಕೆ ಅಲ್ಲಿಂದ ನನ್ನ ಮಗ ಹಾಗೂ ಪತ್ನಿಗೆ ಜೀವ ಬೆದರಿಕೆ ಒಡ್ಡಿ ಆತನನ್ನು ಕರೆದೊಯ್ದು ಮಾನಸಿಕ ಹಿಂಸೆ ನೀಡಿದ್ದಾಳೆ. ಬಳಿಕ ಆತನ ಪರಿಸ್ಥಿತಿ ಚಿಂತಾಜನಕವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ. 29ರಂದು ಮುಂಜಾನೆ ಆತ ಮೃತಪಟ್ಟಿದ್ದಾನೆ’ ಎಂದರು.
ಸುದೀಪ್ ರೈಗೆ ಆಗಿರುವ ಮಾನಸಿಕ ಕಿರುಕುಳವನ್ನು ತಾನೂ ಸೌಮ್ಯ ಅವರಿಂದ ಅನುಭವಿಸಿದ್ದು ಕಳೆದ ವರ್ಷ ವಿವಾಹದ ಹಂತಕ್ಕೆ ತಲುಪಿದ್ದ ನಮ್ಮ ಸಂಬಂಧ ಮುರಿದು ಬಿದ್ದಿತ್ತು. ಹಾಗಿದ್ದರೂ ಮಾನಸಿಕ ಹಿಂಸೆ ತಾಳಲಾರದೆ ತಾನು ಕೆಲ ಸಮಯ ಮುಂಬೈಗೆ ಹೋಗಿ ನೆಲೆಸುವಂತೆ ಆಗಿತ್ತು. ನಮ್ಮಿಬ್ಬರ ಸಂಬಂಧ ಮುಂದುವರಿದ್ದರೆ ಸುದೀಪ್ ರೈ ಪರಿಸ್ಥಿತಿ ತನ್ನದಾಗಿರುತ್ತಿತ್ತು. ಹಾಗಾಗಿ ಈ ಪ್ರಕರಣದ ಬಗ್ಗೆ ತನಿಖೆಯಾಗಿ ಸುದೀಪ್ ರೈಗೆ ನ್ಯಾಯ ದೊರೆಯಬೇಕು ಎಂದು ಎಂದು ವೇಣುಗೋಪಾಲ್ ಎಂಬವರು ಆಗ್ರಹಿಸಿದರು.





