ಉಡುಪಿ: ಸ್ಥಳ ಮಹಜರು ವೇಳೆ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಪೋಕ್ಸೊ ಪ್ರಕರಣದ ಆರೋಪಿಯನ್ನು ಲಾಠಿ ಏಟು ಕೊಟ್ಟು ವಶಕ್ಕೆ ಪಡೆದುಕೊಂಡ ಘಟನೆ ರವಿವಾರ ನಡೆದಿದೆ.
ಈ ವೇಳೆ ಗಾಯಗೊಂಡ ಉಡುಪಿ ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ರಿತೇಶ್ ಹಾಗೂ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿರುವ ಉತ್ತರ ಪ್ರದೇಶ ಮೂಲದ ಮಣಿಪಾಲ ವಿ.ಪಿ.ನಗರದ ನಿವಾಸಿ ಮುಹಮ್ಮದ್ ದಾನೀಶ್(29) ಎಂಬವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಯಡಿ ದಾಖಲಾಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.12ರಂದು ಆರೋಪಿ ಮುಹಮ್ಮದ್ ದಾನೀಶ್ನನ್ನು ದಸ್ತಗಿರಿ ಮಾಡಿದ್ದು, ಈತನನ್ನು ತನಿಖೆಗೆ ಒಳಪಡಿಸಿ ಜು.13ರಂದು ತನಿಖೆಯ ಬಗ್ಗೆ ಮಣಿಪಾಲ ತಾಂಗೋಡು 2ನೇ ಕ್ರಾಸ್ ಹಾಡಿ ಬಳಿ ಕೃತ್ಯವೆಸಗಿದ ಸ್ಥಳವನ್ನು ಪಂಚನಾಮೆಯನ್ನು ಮಾಡುವ ಕರೆದುಕೊಂಡು ಹೋಗಲಾಗಿತ್ತು.
ಈ ಸಮಯದಲ್ಲಿ ಆರೋಪಿ ಆತನಿಗೆ ಕೈಕೊಳ ಹಿಡಿದುಕೊಂಡಿದ್ದ ಸಿಬ್ಬಂದಿ ರಿತೇಶ್ರವರ ಎದೆಗೆ ಎರಡೂ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಬಂದಿದ್ದನು.
ಆಗ ಪೊಲೀಸ್ ನಿರೀಕ್ಷಕರರಾದ ರಾಮಚಂದ್ರ ನಾಯಕ್ ತಡೆದಾಗ ಅವರ ಮೇಲು ಒದೆಯಲು ಬಂದಿದ್ದನು. ಆ ಸಮಯ ಲಾಠಿಯಿಂದ ಆತನ ಕಾಲಿಗೆ ಹೊಡೆದು, ಅವನನ್ನು ನಿಯಂತ್ರಿಸಿದ್ದು, ಉಳಿದ ಸಿಬ್ಬಂದಿಗಳು ಆತನನ್ನು ಹಿಡಿದುಕೊಂಡರು.
ಈ ಪ್ರಕರಣದಲ್ಲಿ ಗಾಯಗೊಂಡ ಸಿಬ್ಬಂದಿ ರಿತೇಶ್ ಹಾಗೂ ಆರೋಪಿ ಮೊಹಮ್ಮದ್ ಡಾನೀಶ್ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಲಾಗಿದೆ.