Home Crime ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ಗೋ ಕಳವು ಪ್ರಕರಣ ಬೆನ್ನತ್ತಿದ ಪೊಲೀಸರ 3 ತಂಡ :...

ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ಗೋ ಕಳವು ಪ್ರಕರಣ ಬೆನ್ನತ್ತಿದ ಪೊಲೀಸರ 3 ತಂಡ : ಇಬ್ಬರ ಬಂಧನ, ಕಾರುಗಳು ವಶಕ್ಕೆ, 4 ಜಾನುವಾರು ರಕ್ಷಣೆ…!!

ಉಡುಪಿ: ಬೈಂದೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಆಗಾಗ್ಗೆ‌ ನಡೆಯುತ್ತಿದ್ದ ದನ ಕಳ್ಳತನ ಪ್ರಕರಣಗಳ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆ ಬಗ್ಗೆ ಉಡುಪಿ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮವಹಿಸಿದ್ದು ಕಾರ್ಯಾಚರಣೆ ಮೂಲಕ ಇಬ್ಬರು ಆರೋಪಿಗಳ ಸಹಿತ ಸಾಗಾಟಕ್ಕೆ ಬಳಸಿದ ವಾಹನಗಳನ್ನು ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಪ್ರಕರಣಗಳಲ್ಲಿ ಮೊಹಮ್ಮದ ಕೈಪ್‌ ಸಾಸ್ತಾನ ಮತ್ತು ಮೊಹಮ್ಮದ್ ಸುಹೇಲ್‌ ಖಾದರ್ ಉಚ್ಚಿಲ ಎನ್ನುವ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜಾನುವಾರುಗಳನ್ನು ಕಳವು ಮಾಡಿ ಸಾಗಾಟ ಮಾಡಿದ ಕಾರುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಕಾರಿನಲ್ಲಿ ಸಾಗಾಟ ಮಾಡಿದ 4 ದನಗಳನ್ನು ರಕ್ಷಿಸಿ ಗೋಶಾಲೆ ಬಿಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

3 ತಂಡಗಳ ರಚನೆ-ಕ್ಷಿಪ್ರ ಕಾರ್ಯಾಚರಣೆ:
ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಜಾನುವಾರು ಕಳವಿನ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಕಾನೂನು ಕ್ರಮಕ್ಕೆ ಮುಂದಾಗಿತ್ತು. ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್‌ ಶಂಕರ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ನಾಯ್ಕ್‌ ಹಾಗೂ ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಹೆಚ್‌.ಡಿ ಕುಲಕರ್ಣಿಯವರ ನಿರ್ದೇಶನದಂತೆ ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸವೀತ್ರತೇಜ್ ನೇತೃತ್ವದಲ್ಲಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಮತ್ತು ಪತ್ತೆಗೆ 3 ತಂಡಗಳಾಗಿ ನೇಮಕ ಮಾಡಲಾಗಿತ್ತು. ತಂಡದ ನೇತೃತ್ವವನ್ನು ಬೈಂದೂರು ಪಿಎಸ್ಐ ತಿಮ್ಮೇಶ್ ಬಿ.ಎನ್., ಪಿಎಸ್ಐ ನವೀನ ಬೋರಕರ್, ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ, ಗಂಗೊಳ್ಳಿ ಠಾಣೆ ಪಿಎಸ್ಐ ಬಸವರಾಜ್‌, ವಿವಿಧ ಠಾಣೆಯ ಸಿಬ್ಬಂದಿಗಳಾದ ನಾಗೇಂದ್ರ, ಮೋಹನ, ಸುರೇಶ್‌, ಚೇತನ್‌, ಜಯರಾಮ, ಸತೀಶ್‌, ಚಿದಾನಂದ, ಮಾಳಪ್ಪ ದೇಸಾಯಿ, ಶ್ರೀಧರ ಪಾಟೀಲ್‌, ಪರಯ್ಯ ಮಠಪತಿರವರ ತಂಡ ಕಾರ್ಯಾಚರಣೆಯಲ್ಲಿದ್ದರು.