ಮಂಗಳೂರು : ತಮ್ಮಲ್ಲಿ ಏನಾದರೂ ನ್ಯೂನತೆಗಳಿದ್ದರೆ ಅವುಗಳನ್ನೇ ಮುಂದಿಟ್ಟು ಕೈಚೆಲ್ಲಿ ಕೂರುವವರೇ ಅಧಿಕ. ಸರಕಾರದ ಸೌಲಭ್ಯಗಳು ದೊರಕಿಲ್ಲ ಎಂದು ಗೋಗರೆಯುವವರು ಅನೇಕರು.
ಆದರೆ ಮಂಗಳೂರಿನ ಹೊಗೆಬಜಾರ್ನಲ್ಲಿ ನೆಲೆಸಿರುವ ಮಾಣಿಕ್ಯಂ ಹಾಗಲ್ಲ ಬಾಲ್ಯದಲ್ಲೇ ಒಂದು ಕಾಲನ್ನು ಕಳೆದುಕೊಂಡಿರುವ ಅವರು ಕೆಲವು ವರ್ಷ ಭಿಕ್ಷಾಟನೆ ನಡೆಸುತ್ತಿದ್ದರು. ಆದರೆ, ಈಗ ಅದನ್ನು ತೊರೆದು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.
ಮೂಲತಃ ತಮಿಳುನಾಡು ಸೇಲಂನವ ರಾಗಿರುವ ಮಾಣಿಕ್ಯಂ ಕಳೆದ 35 ವರ್ಷ ಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಈಗ ಅವರು ಸ್ಟೇಟ್ಬ್ಯಾಂಕ್ ಬಳಿ ಬೊಂಡ ಮಾರುತ್ತಾ, ಚಪ್ಪಲಿ, ಕೊಡೆ ರಿಪೇರಿ ಮಾಡುತ್ತಾ ಕುಟುಂಬವನ್ನು ಸಲಹುತ್ತಿದ್ದಾರೆ.
ಭಿಕ್ಷಾಟನೆ ತೊರೆದು ಉದ್ಯೋಗ ಅರಸಿದ ವ್ಯಕ್ತಿ ಸುಮಾರು 35 ವರ್ಷದ ಹಿಂದೆ ಮಂಗಳೂರಿಗೆ ಬಂದ ಬಳಿಕ ಮಾಣಿಕ್ಯಂ ಅವರು ಭಿಕ್ಷಾಟನೆಯಲ್ಲಿ ತೊಡಗಿದ್ದರು.
ಸರಕಾರದ ನೆರವು ಪಡೆಯಲಾಗಿಲ್ಲ ಒಂದು ಕಾಲು ಇಲ್ಲದೆ ತಮಿಳುನಾಡಿನಿಂದ ಮಂಗಳೂರಿಗೆ ಬಂದ ಅವರಿಗೆ ಸರಕಾರ ಯಾವುದೇ ನೆರವು ಪಡೆಯಲು ಆಗಲಿಲ್ಲ. ತಮಿಳುನಾಡಿನಲ್ಲಿ ಒಮ್ಮೆ ಅರ್ಜಿ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ದಾಖಲೆಗಳೆಲ್ಲವೂ ತಮಿಳುನಾಡಿನ ಸೇಲಂನ ವಿಳಾಸದಲ್ಲಿರುವುದರಿಂದ ಇಲ್ಲಿ ಪ್ರಯತ್ನಿಸಲಿಲ್ಲ. ಇದರಿಂದಾಗಿ ಅಂಗವಿಕಲರ ವಾಸಾಶನವನ್ನೂ ಪಡೆಯಲಾಗಿಲ್ಲ ಎನ್ನುತ್ತಾರೆ ಮಾಣಿಕ್ಯಂ ಅವರು.
ಸ್ವಂತವಾಗಿ ದುಡಿದ ಹಣದಿಂದ ಸ್ಕೂಟರ್ ಖರೀದಿಸಿದ್ದು, ಮನೆಯಿಂದ ಸ್ಟೇಟ್ಬ್ಯಾಂಕ್ಗೆ ಬರಲು ನೆರವಾಗುತ್ತದೆ. ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯ ವರೆಗೂ ವ್ಯಾಪಾರ ಮಾಡುತ್ತೇನೆ ಎನ್ನುವುದು ಮಾಣಿಕ್ಯಂ ಅವರ ಮಾತು.
ಸರಕಾರ ಭಿಕ್ಷಾಟನೆ ನಿಷೇಧ ಕಾನೂನು ಜಾರಿಗೊಳಿಸಿದ ಬಳಿಕ ಅವರನ್ನು ವಶಕ್ಕೆ ಪಡೆದು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಅದೇ ಸಂದರ್ಭದಲ್ಲಿ ತಾನು ಸ್ವಂತವಾಗಿ ದುಡಿದು ತಿನ್ನಬೇಕೆನ್ನುವ ಛಲ ಅವರಲ್ಲಿ ಮೂಡಿತು. ಸಾಂತ್ವನ ಕೇಂದ್ರದಿಂದ ಹೊರ ಬಂದ ಅವರು ಸ್ಟೇಟ್ಬ್ಯಾಂಕ್ ಬಳಿ ಚಪ್ಪಲಿ, ಕೊಡೆ ರಿಪೇರಿ ಆರಂಭಿಸಿದರು. ಹಂತ ಹಂತವಾಗಿ ಬೊಂಡ, ತಾಳೆಬೊಂಡ ಮಾರಾಟ ಶುರುಮಾಡಿದರು. ಕಳೆದ ಸುಮಾರು 30 ವರ್ಷಗಳಿಂದ ತನ್ನ ಖರ್ಚಿನ ಆದಾಯವನ್ನು ಅವರ ಸ್ವಂತ ದುಡಿಮೆಯಿಂದ ಗಳಿಸುತ್ತಿದ್ದಾರೆ. ಬೊಂಡ, ತಾಳೆಬೊಂಡಕ್ಕೆ ಬೇಸಗೆಯಲ್ಲಿ ಬೇಡಿಕೆ ಹೆಚ್ಚಿರುವ ಕಾರಣದಿಂದ ಉತ್ತಮ ಆದಾಯ ಲಭಿಸುತ್ತದೆ. ಮಳೆಗಾಲದಲ್ಲಿ ಬೊಂಡಾ ವ್ಯಾಪಾರ ಕುಸಿಯುತ್ತದೆ ಎನ್ನುತ್ತಾರೆ ಮಾಣಿಕ್ಯಂ ಅವರು.
ಕುಡ್ಲದ ಜನ ಹೃದಯ ಶ್ರೀಮಂತರು ಹುಟ್ಟೂರಿಗಿಂತ ಮಂಗಳೂರು ತುಂಬಾ ಹಿಡಿಸಿದೆ. ಕುಡ್ಲದ ಜನ ತುಂಬಾ ಒಳ್ಳೆಯವರು. ಹೃದಯ ಶ್ರೀಮಂತರು. ನನ್ನ ಕೆಲಸಕ್ಕೆ ಯಾರೂ ತೊಂದರೆ ನೀಡದೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಮಂಗಳೂರಿಗೆ ಬಂದ ಬಳಿಕ ಊರಿಗೆ ಹೋಗಬೇಕೆನ್ನುವ ಆಸೆ ಮೂಡಿಲ್ಲ. ಸ್ವಾವಲಂಬಿಯಾಗಿ ಬದುಕಲು ಮಂಗಳೂರಿನ ಜನ ಅವಕಾಶ ನೀಡಿದ್ದಾರೆ ಎಂದರು.