Udupi : ವಿದ್ಯಾವಾಚಸ್ಪತಿ ಗೋವಿಂದಾಚಾರ್ಯರ ಬನ್ನಂಜೆ ಬದುಕು, ಸಾಧನೆಯ ಸ್ಮರಣೆಗಾಗಿ ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ ರಾಜ್ಯದ 24 ಕಡೆಗಳಲ್ಲಿ ನಡೆಯಲಿದೆ ಎಂದು ಸಾಂಸ್ಕೃತಿಕ ಚಿಂತಕಿ ವೀಣಾ ಬನ್ನಂಜೆ ತಿಳಿಸಿದ್ದಾರೆ.
ಆ.3ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ಬನ್ನಂಜೆ 90ರ ನಮನ ಅಂಗವಾಗಿ ರಾಜಾಂಗಣ ಬಳಿಯ ಮಥುರಾ ಕಂಫರ್ಟ್ ನಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಬನ್ನಂಜೆ 90ರ ನಮನ ಸಮಿತಿ ಕಾರ್ಯಾಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಬನ್ನಂಜೆ ಗೋವಿಂದಾಚಾರ್ಯ ರಂತಹ ವ್ಯಕ್ತಿಗಳು ಬದುಕಿನಲ್ಲಿ ಮಾಡಿದ ಶ್ರೇಷ್ಠ ಸಾಧನೆ ಸತ್ತ ನಂತರವೂ ಸ್ಮರಣೀಯ ಎಂದರು.
ಸಭೆಯಲ್ಲಿ ನಡೆದಂತೆ ಬನ್ನಂಜೆಯವರ ಮೂಲಮನೆ ಕುಂಜಿಗುಡ್ಡೆಯಿಂದ ಕರಾವಳಿ ಜಂಕ್ಷನ್ ತನಕ ಮೆರವಣಿಗೆ. ಆ. 3ರಂದು ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮ ಉದ್ಘಾಟನೆ, ಬನ್ನಂಜೆ ರಚಿತ ಹಾಡುಗಳ ಗಾಯನ. ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದರಿಂದ ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ ಉದ್ಘಾಟನೆ. ಸಮಾರೋಪದಲ್ಲಿ ಗಂಗಾವತಿ ಪ್ರಾಣೇಶ್, ಲೇಖಕಿ ವೈದೇಹಿ ಮೊದಲಾದ ಗಣ್ಯರು ಉಪಸ್ಥಿತರಿರುವರು.
ಬನ್ನಂಜೆ ಬದುಕಿನ ಎರಡು ಗೋಷ್ಠಿ, ಕೃತಿ ಮತ್ತು ಸ್ಮರಣಿಕೆಗಳ ಪ್ರದರ್ಶನ. ಸಮಾರೋಪದ ಬಳಿಕ ವಿದ್ಯಾಭೂಷಣರಿಂದ ಬನ್ನಂಜೆ ರಚಿತ ಕೃತಿಗಳ ಸುಮಧುರ ಗಾಯನ. 90ರ ಸ್ಮರಣೆಗಾಗಿ 90 ಗಿಡ ನೆಟ್ಟು ಗೋವಿಂದ ವನ ನಿಮ್ಮಾಣಕ್ಕೆ ಚಾಲನೆ.
ಸಭೆಯಲ್ಲಿ ಉದ್ಯಮಿ ಯು. ವಿಶ್ವನಾಥ ಶೆಣೈ, ಡಾ. ಮಾಧವಿ ಭಂಡಾರಿ, ನಾರಾಯಣ ಮಡಿ ಉಪಸ್ಥಿತರಿದ್ದರು. ಸಮಿತಿ ಸಂಚಾಲಕ ರವಿರಾಜ್ ಎಚ್. ಪಿ. ಸ್ವಾಗತಿಸಿ, ಅಸ್ಟ್ರೋ ಮೋಹನ್ ಪ್ರಾಸ್ತಾವಿಕ ಮಾತನಾಡಿದರು. ಜನಾರ್ದನ್ ಕೊಡವೂರು ನಿರೂಪಿಸಿದರು. ಪ್ರೊ. ಸದಾಶಿವ ರಾವ್ ವಂದಿಸಿದರು.


