ಸೋಶಿಯಲ್ ಮೀಡಿಯಾ ವಾರಿಯರ್ಸ್ಗೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಾರ್ನಿಂಗ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಗಳು ಇವರೇ ಎಂದು ಆರೋಪಿಸುತ್ತಿರುವವರು ಸೂಕ್ತ ಸಾಕ್ಷಿಗಳನ್ನು ತಂದರೆ ಪರಿಗಣಿಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳ ಸಂಬಂಧ ನಾವು ಈಗಾಗಲೇ ಲಭ್ಯವಿರುವ ವಿಡಿಯೋ, ಫೋಟೋ ಹಾಗೂ ಇತರೆ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದೇವೆ.
ಆದರೂ ಕೆಲವರು, ‘ಅಸಲಿ ಆರೋಪಿಗಳು ಇವರೇ, ಆದರೆ ಇನ್ನೂ ಬಂಧನವಾಗಿಲ್ಲ’ ಎಂದು ಎಲ್ಲೋ ಕುಳಿತುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಹೀಗೆ ಹೇಳುವವರು, ಆರೋಪಿಗಳು ಅವರೇ ಎನ್ನುವುದಕ್ಕೆ ತಮ್ಮ ಬಳಿ ಯಾವುದೇ ಸಾಕ್ಷ್ಯಗಳಿದ್ದರೆ ಅದನ್ನು ನಮ್ಮ ಗಮನಕ್ಕೆ ತನ್ನಿ, ನಾವು ಅದನ್ನು ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ತಿಳಿಸಿದರು.
ಇದೇ ವೇಳೆ, ದ್ವೇಷ ಭಾಷಣ ಮಾಡುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಎಚ್ಚರಿಸಿದರು. “ಬಿಎನ್ಎಸ್ ಹೊಸ ಕಾಯಿದೆಯಡಿ (ಭಾರತೀಯ ನ್ಯಾಯ ಸಂಹಿತೆ) ದ್ವೇಷ ಭಾಷಣ ಮಾಡುವವರನ್ನು ವೇದಿಕೆಯಿಂದಲೇ ಎಳೆದೊಯ್ದು ಬಂಧಿಸುವ ಅವಕಾಶವಿದೆ” ಎಂದರು.
“ಶಂಕಿತ ಆರೋಪಿಗಳನ್ನು ನಾವು ಹಲವು ಬಾರಿ ತನಿಖೆಗಾಗಿ ಠಾಣೆಗೆ ಕರೆಸುತ್ತೇವೆ. ಆದರೆ ಇದನ್ನೇ ಕೆಲವರು ‘ತನಿಖೆಯ ನೆಪದಲ್ಲಿ ಪೊಲೀಸ್ ಟಾರ್ಚರ್ ಕೊಡುತ್ತಿದ್ದಾರೆ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕುತ್ತಾರೆ. ಬಿಎನ್ಎಸ್ ಕಾಯಿದೆಯಡಿ ಇದು ಕೂಡ ಒಂದು ಅಪರಾಧ. ಆದ್ದರಿಂದ, ಯಾರೇ ಆಗಲಿ ತನಿಖೆಗೆ ಸಹಕರಿಸಬೇಕು. ಅದನ್ನು ಬಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ್ದನ್ನು ಬರೆದರೆ, ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ” ಎಂದು ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದರು.