ಕಲೆಯ ಬೆಳವಣಿಗೆಗೆ ಕಲೆಯನ್ನು ಅಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರು ಬೇಕು : ಡಾ.ಟಿ.ಶ್ಯಾಮ್ ಭಟ್…
ಉಡುಪಿ: ಕಲೆಯ ಬೆಳವಣಿಗೆಗೆ ಕಲೆಯನ್ನು ಅಸ್ವಾದಿಸುವ, ಪ್ರೋತ್ಸಾಹಿಸುವ ಪ್ರೇಕ್ಷಕರು ಬೇಕು. ಉತ್ತಮ ರಂಗಭೂಮಿ ಕಲಾವಿದರಿದ್ದರೆ ಕಲೆಯ ಬೆಳವಣಿಗೆ ಸಾಧ್ಯ ಎಂದು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ.ಶ್ಯಾಮ್ ಭಟ್ ಹೇಳಿದರು.
ಅವರು ಭಾನುವಾರ ಎಂಜಿಎo ಕಾಲೇಜಿನಲ್ಲಿ ರಂಗಭೂಮಿ ಉಡುಪಿ ಆಶ್ರಯದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ಪರಿಷತ್ ಉಡುಪಿಯ ಸಹಭಾಗಿತ್ವದಲ್ಲಿ ನಡೆಯುತ್ತಿರುವ ದಕ್ಷಿಣ ಮಧ್ಯ ಭಾರತದ ರಾಜ್ಯಗಳ ಜಾನಪದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲೆಗೆ ನೀಡಿದ ಅನುಪಮ ಪ್ರೋತ್ಸಾಹಕ್ಕಾಗಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಕತ್ವದ ೨೦೨೬ನೇ ಸಾಲಿನ ‘ತಲ್ಲೂರ್ಸ್ ಯಕ್ಷರತ್ನ ಪ್ರಶಸ್ತಿ ‘ಯನ್ನು ಸ್ವೀಕರಿಸಿ ಮಾತನಾಡಿದರು.
೨೦ ವರ್ಷಗಳ ಹಿಂದೆ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿನ ಇಲ್ಲಿನ ಸಂಸ್ಕೃತಿ, ಜನಪದ ಕಲೆಗಳನ್ನು ನೋಡಿ ಅರಿತಿದ್ದೇನೆ. ಈ ಪ್ರಶಸ್ತಿ ಕಲೆಯ ಪೋಷಕರಿಗೆ ಹಾಗೂ ಪ್ರೋತ್ಸಾಹಕರಿಗೆ ಅರ್ಪಿಸುತ್ತಿದ್ದೇನೆ. ಡಾ.ತಲ್ಲೂರು ಅವರ ನೇತೃತ್ವದಲ್ಲಿ ಇಂತಹ ಉತ್ತಮ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ಅವರು ಹಾರೈಸಿದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಮಾತನಾಡಿ, ಉಡುಪಿ ಸಾಂಸ್ಕೃತಿಕ ಲೋಕದ ತವರೂರು. ಯಕ್ಷಗಾನ, ನಾಟಕ, ಜನಪದ ಹೀಗೆ ಎಲ್ಲಾ ವೈವಿಧ್ಯಗಳು ಇಲ್ಲಿವೆ. ಡಾ.ತಲ್ಲೂರು ಅವರ ನೇತೃತ್ವದಲ್ಲಿ ಜಿಲ್ಲೆಯ ಜನಪದ ಕಲೆಗಳ ಜೊತೆಗೆ ಇದೀಗ ಉತ್ತರ ಭಾರತದ ಜನಪದದ ಸೊಗಡನ್ನು ವೀಕ್ಷಿಸುವಂತಾಗಿರುವುದು ಸಂತೋಷ ತಂದಿದೆ ಎಂದರು.
ಕಾರ್ಯಕ್ರಮದ ರೂವಾರಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಡಾ.ಟಿ.ಶ್ಯಾಮ್ ಭಟ್ ಅವರು ಯಕ್ಷಗಾನ ಕಲೆಗೆ ನೀಡುತ್ತಿರುವ ಪ್ರೋತ್ಸಾಹವನ್ನು ಕಂಡು ಬೆರಗಾಗಿದ್ದೇನೆ. ಇಂತಹ ಕಲಾ ಪ್ರೋತ್ಸಾಹಕರಿಂದಲೇ ಯಕ್ಷಗಾನ ಇಂದು ಜನಮಾನಸದಲ್ಲಿ ರಾರಾಜಿಸುತ್ತಿದೆ. ಟ್ರಸ್ಟ್ನ ಪ್ರಯೋಜಕತ್ವದಲ್ಲಿ ಇಂತಹ ಕಲಾ ಸಂಘಟಕರು, ಕಲಾವಿದರು, ಕಲಾ ಪ್ರೋತ್ಸಾಹಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಟಿ .ಶ್ಯಾಮ್ ಭಟ್ ಅವರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರಾಯೋಜಿತ ೨೦೨೬ನೇ ಸಾಲಿನ ‘ತಲ್ಲೂರ್ಸ್ ಯಕ್ಷರತ್ನ ಪ್ರಶಸ್ತಿ ‘ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಗುಜ್ಜಾಡಿ ವರುಣ್ ನಾಯಕ್, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ನ ಟ್ರಸ್ಟಿ ತಲ್ಲೂರು ಗಿರಿಜಾ ಶಿವರಾಮ ಶೆಟ್ಟಿ, ರಂಗಭೂಮಿ ಪ್ರಧಾನ ಕಾರ್ಯದರ್ಶಿ ಪ್ರದೀಪಚಂದ್ರ ಕುತ್ಪಾಡಿ, ಉಪಾಧ್ಯಕ್ಷರುಗಳಾದ ಎನ್.ಆರ್.ಬಲ್ಲಾಳ್ ಮತ್ತು ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ಮೂರು ದಿನಗಳ ಉತ್ತರ ಭಾರತದ ಜಾನಪದ ಉತ್ಸವಕ್ಕೆ ಸಹಕರಿಸಿದ ದಕ್ಷಿಣ ಮಧ್ಯವಲಯ ಸಾಂಸ್ಕೃತಿಕ ಕೇಂದ್ರದ ಅಧಿಕಾರಿಗಳಾದ ಗಜಾನನ ಹಾಗೂ ನೀಲೇಶ್ ಅವರನ್ನು ಗೌರವಿಸಲಾಯಿತು.
ಶ್ರೀನಿವಾಸ ಉಪಾಧ್ಯಾಯ ಹಾಗೂ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಆಚಾರ್ಯ ವಾಚಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜಾನಪದ ಕಲಾ ವೈವಿಧ್ಯದ ಮೂರನೇ ಹಂತದಲ್ಲಿ ಆಂಧ್ರ ಪ್ರದೇಶದ ಉರುಮುಲು ನೃತ್ಯ, ತೆಲಂಗಾಣದ ಗುಸ್ತಾದಿ ನೃತ್ಯ, ಮಹಾರಾಷ್ಟ್ರದ ಲಾವಣಿ, ಕೋಳಿ ನೃತ್ಯ, ತರ್ಪಾ ಕುಣಿತ, ಛತ್ತೀಸಗಢದ ಪಂಥಿ ಕುಣಿತ, ಮಧ್ಯಪ್ರದೇಶದ ಬಧಾಯಿ ಹಾಗೂ ನೋರ್ಟಾ ನೃತ್ಯದ ಜತೆಗೆ ಕರ್ನಾಟಕದ ಗೋಂದೋಲು, ಕೊರಗರ ಸಾಂಸ್ಕೃತಿಕ ನೃತ್ಯಗಳು ಪ್ರಸ್ತುತಿಗೊಂಡಿತು.



