Home Crime ಬೆಳ್ತಂಗಡಿ : ಧುಮ್ಮಿಕ್ಕಿ ಹರಿಯುವ ಹೊಳೆ ದಾಟಲೆತ್ನಿಸಿ ಬೈಕ್ ಸಹಿತ ಕೊಚ್ಚಿ ಹೋದ ಯುವಕರು…!!

ಬೆಳ್ತಂಗಡಿ : ಧುಮ್ಮಿಕ್ಕಿ ಹರಿಯುವ ಹೊಳೆ ದಾಟಲೆತ್ನಿಸಿ ಬೈಕ್ ಸಹಿತ ಕೊಚ್ಚಿ ಹೋದ ಯುವಕರು…!!

ಬಂಡೆಗಳ ಎಡೆಯಲ್ಲಿ ಸಿಲುಕಿ ಪಾರು….

ಬೆಳ್ತಂಗಡಿ : ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿ ಯುವಕರಿಬ್ಬರು ಬೈಕಿನಲ್ಲಿ ಹೊಳೆ ದಾಟಲು ಯತ್ನಿಸಿ ಬೈಕ್ ಸಹಿತ ನೀರಿನಲ್ಲಿ ಕೊಚ್ಚಿ ಹೋಗಿದ್ದಲ್ಲದೆ, ಬಳಿಕ ಬಂಡೆಗಳ ಎಡೆಯಲ್ಲಿ ಸಿಲುಕಿ ಅಪಾಯದಿಂದ ಪಾರಾಗಿ ಬಂದ ಘಟನೆ ನಡೆದಿದೆ.

ಸವಣಾಲು ಗ್ರಾಮದ ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಪ್ರದೇಶವನ್ನು ಸಂಪರ್ಕಿಸುವ ಕೂಡುಜಾಲು ಎಂಬಲ್ಲಿ ಹರಿಯುವ ಹೊಳೆಯಲ್ಲಿ ಘಟನೆ ಸಂಭವಿಸಿದೆ.

ಕರಿಯ ಮಲೆಕುಡಿಯ ಎಂಬವರ ಮಗ ಸತೀಶ್ ಮತ್ತು ಸಹ ಸವಾರ ಸುಳ್ಯೋಡಿ ನಿವಾಸಿ ಸಂಜೀವ ಪೂಜಾರಿ ಜೊತೆಯಾಗಿ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಈ ಹೊಳೆಯನ್ನು ಬೈಕ್ ಸಮೇತ ದಾಟಲು ಯತ್ನಿಸಿದ್ದಾರೆ. ‌ಈ ವೇಳೆ, ಬೈಕ್ ಸಹಿತ ಹೊಳೆ ನೀರಿನಲ್ಲಿ ಕೊಚ್ಚಿ ಹೋಗಿರುತ್ತಾರೆ. ಅದೃಷ್ಟವಶಾತ್ ಬೈಕ್ ನದಿ ಬಂಡೆಗಳ ಎಡೆಯಲ್ಲಿ ಸಿಲುಕಿದ್ದು, ಯುವಕರಿಬ್ಬರು ಸಿನಿಮೀಯ ರೀತಿಯಲ್ಲಿ ಬದುಕುಳಿದಿದ್ದಾರೆ.

ಹಿತ್ತಿಲಪೇಲ ಆಸುಪಾಸಿನ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು, ಮಳೆಗಾಲದಲ್ಲಿ ಹೊಳೆ ಧುಮ್ಮಿಕ್ಕಿ ಹರಿಯುತ್ತದೆ. ಇಲ್ಲೊಂದು ಸೇತುವೆ ನಿರ್ಮಿಸಬೇಕು ಎನ್ನುವ ಒತ್ತಾಯವನ್ನು ಸ್ಥಳೀಯರು ಮಾಡುತ್ತ ಬಂದಿದ್ದರೂ ಅರಣ್ಯ ಇಲಾಖೆಯ ಕಾನೂನಿನಿಂದಾಗಿ ಸಾಧ್ಯವಾಗಿಲ್ಲ.

ಪ್ರದೇಶದಲ್ಲಿ ಸುಮಾರು 9 ಕುಟುಂಬಗಳ 60ರಷ್ಟು ಜನರು ವಾಸಿಸುತ್ತಿದ್ದು, ಮಕ್ಕಳು, ಯುವಕರು, ಮಹಿಳೆಯರು ದೈನಂದಿನ ಕಾರ್ಯಕ್ಕಾಗಿ ಹೊಳೆ ದಾಟಿಕೊಂಡೇ ಹೋಗಬೇಕಾಗಿದೆ. ಮೂರು ದಿನಗಳಿಂದ ಭಾರೀ ಮಳೆ ಆಗುತ್ತಿದ್ದು ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದ್ದರೂ ಯುವಕರು ದುಸ್ಸಾಹಸಕ್ಕಿಳಿದು ಪಾರಾಗಿ ಬಂದಿದ್ದಾರೆ.