ಉಡುಪಿ : ಸಾಮಗಾನ” ಆಧ್ಯಾತ್ಮ ಮತ್ತು ಕಲಾ ಕೇಂದ್ರವನ್ನು ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಕೊಡವೂರಿನ ಲಕ್ಷ್ಮೀನಗರದಲ್ಲಿ ಶುಕ್ರವಾರದಂದು ಉದ್ಘಾಟಿಸಿದರು.
ಬೆಳಗ್ಗೆ ಅಚಿಂತ್ಯಾದಲ್ಲಿ ಶಂಕರ ಜಯಂತಿ ಮಹೋತ್ಸವದೊಂದಿಗೆ ಕಾರ್ಯಕ್ರಮವು ಆರಂಭವಾಗಿ ರವೀಂದ್ರ ಹೆಬ್ಬಾರ್ ಬವಲಾಡಿ ಮತ್ತು ವೈದಿಕ ವೃಂದದವರೊಂದಿಗೆ ವಿಷ್ಣು ಸಹಸ್ರನಾಮ ಮತ್ತು ರುದ್ರ ಪಠಣ ನಡೆಯಿತು.
ಕೆಎಂಸಿಯ ನಿವೃತ್ತ ಯೋಗ ಪ್ರೊ.ಗಣಪತಿ ಜೋಶಿಯವರು ಶ್ರೀ ಆದಿ ಶಂಕರರ ಕುರಿತು ಉಪನ್ಯಾಸ ನೀಡಿದರು.
ಸ್ವಾತಂತ್ರ ಹೋರಾಟಗಾರ, ಹರಿಕಥಾ ವಿದ್ವಾಂಸ, ತಾಳಮದ್ದಲೆ ಮತ್ತು ಯಕ್ಷಗಾನ ಕಲಾವಿದಾರಾಗಿದ್ದ
ಕೀರ್ತಿ ಶೇಷ ಕಮಲಾಕ್ಷಿ ಮತ್ತು ಶಂಕರನಾರಾಯಣ ಸಾಮಗ (ದೊಡ್ಡ ಸಾಮಗ)ಸಂಸ್ಮರಣೆಯ ಅಂಗವಾಗಿ ಆಧ್ಯಾತ್ಮ ಮತ್ತು ಕಲಾಕೇಂದ್ರ “ಸಾಮಗಾನ” ವನ್ನು ಶ್ರೀಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಲೋಕಾರ್ಪಣೆ ಗೊಳಿಸಿದರು.
ಸಾಂಸ್ಕೃತಿಕ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿ ಸಾಮಗರ ಕೊಡುಗೆಯನ್ನು ಸ್ಮರಿಸಿ, ಸಾಮಗಾನದ ಎಲ್ಲಾ ಯೋಜನೆಗಳು ಯಶಸ್ವಿಯಾಗಲಿ ಎಂದು ಆಶೀರ್ವದಿಸಿದರು.
ಮುಖ್ಯ ಅತಿಥಿಗಳಾದ ಪ್ರಮೋದ್ ಮಧ್ವರಾಜ್, ಮುರಳಿ ಉಪಾಧ್ಯಾಯ , ಅಲ್ವಿನ್ ದಾಂತಿ, ವಿಜಯ ಕೊಡವೂರು, ವಾರಿಜ ರಾವ್ ದೊಡ್ಡ ಸಾಮಗರ ಪಾಂಡಿತ್ಯ, ಯಕ್ಷಗಾನ ಸೇವೆ, ಗಾಂಧಿ ತತ್ವ, ಕೃಷಿ ಹಾಗೂ ಧಾರ್ಮಿಕ ಚಿಂತನೆಯ ಅನುಭವಗಳನ್ನು ಹಂಚಿಕೊಂಡರು.
ಮೊಗೇರಿ ಜನಾರ್ದನ ಅಡಿಗರು ವೇದಘೋಷ, ಪಂಚಾಂಗ ಪಠಣ ,ಸಾಮಗ ಅಜ್ಜ ಅಜ್ಜಿಯರ ಬಗ್ಗೆ ಬರೆದ ಕವನವನ್ನು ವಾಚಿಸಿದರು.
ಸಭಾಧ್ಯಕ್ಷ ಲಕ್ಷ್ಮೀನಾರಾಯಣ ಸಾಮಗರು ಸಾಮಗಾನದ ಅರ್ಥವನ್ನು ತಿಳಿಸಿ, ಅಪ್ಪನಿಗೆ ಸ್ವಾತಂತ್ರ್ಯ ಹೋರಾಟಕ್ಕೆ ಸಿಕ್ಕಿದ ಭೂಮಿಯಲ್ಲಿ ಕೃಷಿಯನ್ನು ಮಾಡಿ ಜೀವ ತುಂಬಿಸಿದ್ದು, ಈಗ ಆ ಕೆಲಸವನ್ನು ಅವರ ಮೊಮ್ಮಕ್ಕಳು ಮುಂದುವರಿಸುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೊಡ್ಡ ಸಾಮಗರ ಒಡನಾಟದವರಿಗೆ, ಹಿರಿಯರಿಗೆ ಹಾಗೂ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು.
ಅನುಪಮಾ ಸ್ವಾಗತಿಸಿ, ಪ್ರಾಸ್ತಾವಿಸಿ ಧನ್ಯವಾದವಿತ್ತರು .
ಕಾರ್ಯಕ್ರಮದ ಕೊನೆಯಲ್ಲಿ ವಿಶ್ವಕರ್ಮ ಕುಣಿತ ಭಜನಾ ಮಂಡಳಿ ಮಧ್ವ ನಗರ ಇವರಿಂದ ಭಜನೆ ಸೇವೆ ನೆರವೇರಿತು.