ಉಡುಪಿ : ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ 80 ಬಡಗುಬೆಟ್ಟು ಗ್ರಾಮದ ರಾಹುಲ್ನಗರದ ವೀರ ಮಾರುತಿ ಭಜನಾ ಮಂದಿರ ಬಳಿ ಪಾರ್ಕ್ ಮಾಡಿದ್ದ ಪಲ್ಸರ್ ಬೈಕ್ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಮಣಿಪಾಲ ಪೊಲೀಸರು ಕೇವಲ 11ಗಂಟೆಗಳಲ್ಲಿ ಇಬ್ಬರು ಕುಖ್ಯಾತ ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಗಳನ್ನು 80ಬಡಗುಬೆಟ್ಟು ಗ್ರಾಮದ ನೇತಾಜಿನಗರದ ನಿವಾಸಿಗಳಾದ ಶರತ್ (26) ಹಾಗೂ ಗಣೇಶ್ ( 31 ) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಇಬ್ಬರು ರೂಢಿಗತ ಕಳ್ಳರಾಗಿದ್ದು, ಇವರ ವಿರುದ್ಧ ಮಣಿಪಾಲ, ಉಡುಪಿ ನಗರ, ಭದ್ರಾವತಿ, ಕೊಪ್ಪ, ತೀರ್ಥಹಳ್ಳಿ, ಮಡಿಕೇರಿ ಹಾಗೂ ತುಮಕೂರು ಎಕ್ಷಟೆನ್ಶನ್ ಪೊಲೀಸ್ ಠಾಣೆಗಳಲ್ಲಿ 11ಕ್ಕೂ ಅಧಿಕ ಕಳವು ಪ್ರಕರಣಗಳು ದಾಖಲಾಗಿವೆ.



