Home Kundapura News ಸಾಲಿಗ್ರಾಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಮಹಾಪೂಜೆ

ಸಾಲಿಗ್ರಾಮದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದ ಮಹಾಪೂಜೆ

ಸಾಲಿಗ್ರಾಮ : ಕನ್ನಡ ಸೇರಿದಂತೆ ಬಹುಭಾಷಾ ಚಿತ್ರರಂಗದಲ್ಲಿ ತನ್ನ ವಿಭಿನ್ನ ಶೈಲಿ ಮತ್ತು ಹೊಸ ಪರಿಕಲ್ಪನೆಗಳ ಮೂಲಕ ಗುರುತಿಸಿಕೊಂಡಿರುವ ನಟ, ನಿರ್ದೇಶಕ ಉಪೇಂದ್ರ ಅವರು ಕುಟುಂಬ ಸಮೇತ ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿ, ಕುಲದೇವರಾದ ಶ್ರೀ ಗುರುನರಸಿಂಹ ಸ್ವಾಮಿಗೆ ವಿಶೇಷ ಮಹಾಪೂಜೆ ಸಲ್ಲಿಸಿದರು.

 

ಕನ್ನಡ ಚಿತ್ರರಂಗದಲ್ಲಿ ಶ್!,A, ಉಪೇಂದ್ರ ಮೊದಲಾದ ವಿಭಿನ್ನ ಶೀರ್ಷಿಕೆಗಳ ಮತ್ತು ವಿಶಿಷ್ಟ ಕಥಾಹಂದರಗಳ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ ಖ್ಯಾತಿ ಉಪೇಂದ್ರ ಅವರದ್ದು. ತಮ್ಮ ವೈಚಾರಿಕ ಚಿತ್ರಗಳು ಮತ್ತು ವಿಭಿನ್ನ ನಿರೂಪಣಾ ಶೈಲಿಯಿಂದ ಅವರು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿಯೂ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅವರ ಹಲವು ಚಿತ್ರಗಳು ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗಿವೆ.

ಅವರ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಖ್ಯಾತ ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿರುವವರು. ಪುತ್ರ ಆಯುಷ್ ಉಪೇಂದ್ರ ಇತ್ತೀಚೆಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ರಕ್ತ ಕಾಶ್ಮೀರ ಸಿನಿಮಾದ ಮೂಲಕ ನಾಯಕ ನಟನಾಗಿ ಮೊದಲ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಕೋಟ ಮೂಲದ ಉಪೇಂದ್ರ ಅವರು ಕೂಟ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದವರು. ಅವರ ಕುಲದೇವರಾಗಿರುವ ಶ್ರೀ ಗುರುನರಸಿಂಹ ಸ್ವಾಮಿಗೆ ತಮ್ಮ ಮತ್ತು ಪುತ್ರನ ಮುಂದಿನ ಚಿತ್ರಗಳ ಯಶಸ್ಸಿಗಾಗಿ ವಿಶೇಷ ಮಹಾಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ ಹಾಗೂ ಸದಸ್ಯ ಶ್ರೀಧರ್ ರಾವ್ ಕೇರಳ, ಸಹ ವ್ಯವಸ್ಥಾಪಕ ಗಣೇಶ್ ಭಟ್ ಅವರು ಉಪೇಂದ್ರ ಕುಟುಂಬಕ್ಕೆ ದೇವರ ಪ್ರಸಾದ ನೀಡಿ ಶುಭಾಶಯ ಕೋರಿದರು.