ಕಾರ್ಕಳ: ಪಡುಬಿದ್ರಿಯಿಂದ ಸ್ಥಳಾಂತರಗೊಂಡು ಪಳ್ಳಿ ಗ್ರಾಮದಲ್ಲಿ ತಲೆ ಎತ್ತುತ್ತಿರುವ ವಿವಾದಿತ ‘ಫಿಶ್ ಮಿಲ್’ ಘಟಕದ ಕಾಮಗಾರಿಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ನಡೆಯುತ್ತಿರುವ ಈ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಫೆಬ್ರವರಿ 23 ರ ಸೋಮವಾರದಂದು ಪಳ್ಳಿ ಪಂಚಾಯತ್ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಿಮಲೆ ಎಂಬಲ್ಲಿನ ಸರ್ವೆ ಸಂಖ್ಯೆ 229/1 ರ ಸುಮಾರು 3.60 ಎಕರೆ ಜಾಗದಲ್ಲಿ ಈ ಫಿಶ್ ಮಿಲ್ ಘಟಕದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ಈ ಪ್ರದೇಶವು ಕೃಷಿ ಭೂಮಿಯಾಗಿದ್ದು, ಇಲ್ಲಿ ಕೈಗಾರಿಕಾ ಘಟಕ ಸ್ಥಾಪಿಸಲು ಯಾವುದೇ ಭೂಪರಿವರ್ತನೆ (RTC Conversion) ಮಾಡಲಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು, ಒಂದು ವೇಳೆ ಈ ಘಟಕ ಸ್ಥಾಪನೆಯಾದರೆ ಪರಿಸರದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಕೂಡಲೇ ಕಾಮಗಾರಿ ಸ್ಥಗಿತಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ಅಕ್ರಮಗಳ ಸರಮಾಲೆ ಪತ್ತೆ ಹಚ್ಚಿದ ಅಧಿಕಾರಿಗಳು: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಕಳ ತಹಶೀಲ್ದಾರ್ ಪ್ರದೀಪ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್ ಹಾಗೂ ಗ್ರಾಮ ಆಡಳಿತಾಧಿಕಾರಿ ಅಭಿಷೇಕ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಅಚ್ಚರಿಯ ಅಕ್ರಮಗಳು ಬೆಳಕಿಗೆ ಬಂದಿವೆ.
ಪರವಾನಗಿ ರಹಿತ ಕಟ್ಟಡ: ಗ್ರಾಮ ಪಂಚಾಯತ್ನಿಂದ ಯಾವುದೇ ಕಟ್ಟಡ ನಿರ್ಮಾಣ ಪರವಾನಗಿ ಅಥವಾ ಇ-ಖಾತಾ ಪಡೆಯದೆ ಅಕ್ರಮವಾಗಿ ಕಾಮಗಾರಿ ಮುಂದುವರಿಸಲಾಗಿತ್ತು.
ಕೃಷಿ ಉದ್ದೇಶದ ಬಾವಿಗೆ ಮಂಜೂರಾಗಿದ್ದ ವಿದ್ಯುತ್ ಸಂಪರ್ಕವನ್ನು ನಿಯಮಬಾಹಿರವಾಗಿ ಈ ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಬಳಸುತ್ತಿರುವುದು ದೃಢಪಟ್ಟಿದೆ.
ಅರಣ್ಯ ನಾಶ: ಜಮೀನಿನಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆಯೇ ಕಡಿದುರುಳಿಸಿರುವುದು ಪತ್ತೆಯಾಗಿದೆ.
ಅಕ್ರಮಗಳನ್ನು ಖಚಿತಪಡಿಸಿಕೊಂಡ ಪಿಡಿಒ ಅವರು ಕಾಮಗಾರಿಯನ್ನು ತಕ್ಷಣವೇ ನಿಲ್ಲಿಸುವಂತೆ ಉಸ್ತುವಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಅನಧಿಕೃತವಾಗಿ ಬಳಸುತ್ತಿದ್ದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಮೆಸ್ಕಾಂ ಬೈಲೂರು ಶಾಖೆಗೆ ಪತ್ರ ಬರೆದಿದ್ದಾರೆ.
ಗ್ರಾಮಸ್ಥರ ಅಹವಾಲು ಆಲಿಸಿದ ತಹಶೀಲ್ದಾರರು, ಕಾನೂನು ಬಾಹಿರವಾಗಿ ನಡೆಯುತ್ತಿರುವ ಈ ಘಟಕದ ಬಗ್ಗೆ ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಉಷಾ ಎ ಅಂಚನ್, ಶ್ರೀಕಾಂತ್ ಪ್ರಭು, ಸಂದೀಪ್ ಅಮೀನ್, ವಿಜಯ್ ಎಂ. ಶೆಟ್ಟಿ, ಸಂತೋಷ್ ಶೆಟ್ಟಿ ನಿಂಜೂರು, ವಿಶ್ವನಾಥ್ ಭಂಡಾರಿ ವಿಶೇಷ್ ದೇವಾಡಿಗ, ಸಂಗೀತ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.





