ಉಡುಪಿ : ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಕಲಿ ಲೆಟರ್ಹೆಡ್ ಬಳಸಿ ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ಹಸಿ ಸುಳ್ಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರು ತೀರಾ ಕೆಳಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ ಅವರ ಈ ನಡೆಯನ್ನು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಹರೀಶ್ ಕಿಣಿ ಅವರು ತೀವ್ರವಾಗಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಾಸಕರ ನಡವಳಿಕೆಯ ಬಗ್ಗೆ ಈ ಕೆಳಗಿನ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ:
ಜವಾಬ್ದಾರಿಯುತ ಸ್ಥಾನದ ದುರುಪಯೋಗ: ಒಬ್ಬ ಜವಾಬ್ದಾರಿಯುತ ಶಾಸಕರಾಗಿ ಅಧಿಕೃತ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ, ಕೇವಲ ರಾಜಕೀಯ ಲಾಭಕ್ಕಾಗಿ ನಕಲಿ ಪತ್ರವನ್ನು ಹರಿಯಬಿಟ್ಟಿರುವುದು ಅವರ ಘನತೆಗೆ ಶೋಭೆ ತರುವಂತದ್ದಲ್ಲ. ಇದು ಕೇವಲ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಲ್ಲದೆ, ಇಡೀ ಆಡಳಿತ ವ್ಯವಸ್ಥೆಯನ್ನೇ ಹಳಿ ತಪ್ಪಿಸುವ ಕಿಡಿಗೇಡಿ ಕೃತ್ಯವಾಗಿದೆ.
ಮತದಾರರಿಗೆ ಮಾಡಿದ ಅವಮಾನ: ಕಾರ್ಕಳದ ಜನತೆ ಸುನೀಲ್ ಕುಮಾರ್ ಅವರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಮತ ನೀಡಿದ್ದಾರೆಯೇ ಹೊರತು, ಐಟಿ ಸೆಲ್ನ ಕಿಡಿಗೇಡಿಗಳಂತೆ ಸುಳ್ಳು ಸುದ್ದಿ ಹಬ್ಬಿಸಲಿಕ್ಕಲ್ಲ. ಇಂತಹ ಬೇಜವಾಬ್ದಾರಿ ನಡವಳಿಕೆಯಿಂದ ತನಗೆ ಮತ ನೀಡಿದ ಜನರ ಗೌರವಕ್ಕೂ ಅವರು ಧಕ್ಕೆ ತಂದಿದ್ದಾರೆ.
ಸರ್ಕಾರಿ ದಾಖಲೆಗಳನ್ನು ಸೃಷ್ಟಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವುದು ಗಂಭೀರ ಅಪರಾಧವಾಗಿದೆ. ರಾಜಕೀಯವಾಗಿ ಎದುರಿಸಲಾಗದೆ ಇಂತಹ ನಕಲಿ ಪತ್ರಗಳ ಮೊರೆ ಹೋಗಿರುವುದು ಬಿಜೆಪಿಯ ದಿವಾಳಿತನವನ್ನು ತೋರಿಸುತ್ತದೆ.
“ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮರಾಗಿರುವ ಸುನೀಲ್ ಕುಮಾರ್ ಅವರು ತಕ್ಷಣವೇ ಈ ಕುರಿತು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಆಗ್ರಹಿಸಿದ್ದಾರೆ



