ಮಂಗಳೂರು: ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್ರ ಆದೇಶದಂತೆ ಮೂಡುಶೆಡ್ಡೆ ಗ್ರಾಪಂ ವ್ಯಾಪ್ತಿಯಲ್ಲಿರುವ ಮಂಗಳೂರು ತಾಲೂಕು ಹಾಗೂ ನಗರ ಮಹಿಳಾ ಮತ್ತು ಮಕ್ಕಳ ಪೂರಕ ಪೌಷ್ಟಿಕ ಆಹಾರ ತಯಾರಿಕಾ ಕೇಂದ್ರಕ್ಕೆ ದ.ಕ. ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಎಚ್ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಅಂಗನವಾಡಿ ಮಕ್ಕಳಿಗೆ ನೀಡಲಾಗುವ ಪುಷ್ಠಿ, ಮಿಲ್ಲೆಟ್ ಲಡ್ಡು ಮಿಕ್ಸ್ ಮುಂತಾದ ಪೂರಕ ಆಹಾರ ತಯಾರಿಸುವ ಬಗ್ಗೆ ಪರಿಶೀಲನೆ ನಡೆಸಿದ ಡಾ.ಪ್ರವೀಣ್ ಕುಮಾರ್ ಆಹಾರ ಸುರಕ್ಷತಾ ಕಾಯ್ದೆ- 2006ರಡಿ ಪಾಲಿಸಬೇಕಾದ ಎಲ್ಲಾ ನಿಯಮಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಅಲ್ಲದೆ ಮಕ್ಕಳ ಪೌಷ್ಟಿಕ ಆಹಾರ ಪುಷ್ಠಿ, ಮಿಲ್ಲೆಟ್ ಲಡ್ಡು ಪೌಡರ್ ಹಾಗೂ ಸಾಂಬಾರ್ ಪೌಡರ್ಗಳ ಆಹಾರ ಮಾದರಿಯನ್ನು ಸಂಗ್ರಹಿಸಿ ಆಹಾರ ಪ್ರಯೋಗಾಲಯಕ್ಕೆ ಕಳಿಸಿಕೊಡಲಾಯಿತು.
ಆಹಾರ ಪ್ರಯೋಗಾಲಯದ ವರದಿಯ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಸಂಸ್ಥೆಯಲ್ಲಿ ಯಂತ್ರೋಪಕರಣಗಳನ್ನು ಬಳಸಿ ಪ್ಯಾಕಿಂಗ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು.
ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕರಿಗೆ ಪತ್ರ ಬರೆಯಲಾಗುವುದು.
ಉತ್ತಮ ಗುಣಮಟ್ಟದ ಫುಡ್ ಗ್ರೇಡ್ ಪ್ಲಾಸ್ಟಿಕ್ ಬಳಸಿ ಪ್ಯಾಕಿಂಗ್ ಮಾಡಲು ಹಾಗೂ ತಯಾರಿಕಾ ದಿನಾಂಕ, ಅವಧಿ ಮುಕ್ತಾಯ ದಿನಾಂಕ, ಬ್ಯಾಚ್ ನಂಬರ್ ಇನ್ನಿತರ ಲೇಬಲಿಂಗ್ ನಿಯಮಗಳ ಬಗ್ಗೆ ಸೂಕ್ತ ಯಂತ್ರೋಪಕರಣಗಳನ್ನು ಬಳಸಿ ಸ್ಪಷ್ಟವಾಗಿ ಕಾಣುವಂತೆ ಮುದ್ರಿಸಲು ಸೂಚಿಸಲಾಯಿತು.




