ಉಡುಪಿ: ವಿಟ್ಲಪಿಂಡಿ ವೈಭವವನ್ನು ಕಣ್ತುಂಬಿಕೊಳ್ಳಲು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರೇ ಉಡುಪಿಗೆ ಬಂದರೇನೋ ಎಂಬ ಕುತೂಹಲಕ್ಕೆ ಶನಿವಾರ ರಥಬೀದಿಯಲ್ಲಿ ನಡೆದ ದೃಶ್ಯ ಸಾಕ್ಷಿಯಾಯಿತು.
ಕಪ್ಪು ಕೋಟು ಧರಿಸಿದ ಭದ್ರತಾ ಸಿಬ್ಬಂದಿ, ಮುಂಭಾಗದಲ್ಲಿ ಕಪ್ಪು ಬಣ್ಣದ ಕಾರು, ಅದರ ಹಿಂದೆ ತೆರೆದ ವಾಹನದಲ್ಲಿ ನಿಂತು ಜನರತ್ತ ಕೈಬೀಸುತ್ತಿದ್ದ ವಿಜಯ್ ವೇಷಧಾರಿ ಉಡುಪಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದರು.
ವಿಟ್ಲಪಿಂಡಿ ಉತ್ಸವದ ಸಂಭ್ರಮದ ನಡುವೆ ಈ ವಿಶೇಷ ವೇಷಧಾರಿ ಜನರ ಕುತೂಹಲಕ್ಕೆ ಕಾರಣರಾದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಕೈಬೀಸಿ ಪ್ರತಿಸ್ಪಂದಿಸಿದರೆ, ವಾಹನದಲ್ಲಿದ್ದ ವಿಜಯ್ ವೇಷಧಾರಿ ಕೂಡಾ ತಮ್ಮ ವಿಶಿಷ್ಟ ಶೈಲಿಯಲ್ಲಿ ಅಭಿಮಾನಿಗಳನ್ನು ಅಭಿನಂದಿಸುತ್ತ ಸಾಗಿದರು.
ವೇಷಧಾರಿಯ ದೇಹಭಾಷೆ, ಮುಖಭಾವ ಹಾಗೂ ಕೈಬೀಸುವ ಶೈಲಿ ತಮಿಳುನಾಡಿನ ಜನಪ್ರಿಯ ನಟ ಹಾಗೂ ರಾಜಕೀಯ ನಾಯಕ ವಿಜಯ್ ಅವರನ್ನು ಹೋಲುವಂತಿದ್ದು, ನೋಡಿದವರು ಕ್ಷಣಕಾಲ ಅಚ್ಚರಿಗೊಂಡರು.
ವಿಟ್ಲಪಿಂಡಿ ವೈಭವದ ವೈವಿಧ್ಯಮಯ ವೇಷಗಳ ನಡುವೆ ‘ವಿಜಯ್’ ಆಗಮನವೂ ಈ ಬಾರಿಯ ಉತ್ಸವದ ವಿಶೇಷ ಆಕರ್ಷಣೆಯಾಗಿ ಜನಮನ ಸೆಳೆಯಿತು.






