ಕಲಬುರಗಿ : ಪ್ರೇತಾತ್ಮ ಬಿಡಿಸುತ್ತೇನೆ, ವಿವಾಹ ಯೋಗ ಕೂಡಿ ಬರುವ ಹಾಗೆ ಮಾಡುತ್ತೇನೆ, ಅದಕ್ಕೆ ವಿಶೇಷ ಪೂಜೆ ಮಾಡಿಸಬೇಕಾಗುತ್ತದೆ ಎಂದು ನಂಬಿಸಿ ಮಹಿಳಾ ಕಾನ್ಸ್ಟೆಬಲ್ವೊಬ್ಬರ ಬಳಿ 5.19 ಲಕ್ಷ ರೂ.ಪಡೆದು ವಂಚಿಸಿದ್ದ ಕಲಬುರಗಿಯ ಜ್ಯೋತಿಷಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿಯ ಹೇಮಂತ್ಭಟ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ನಗರದಲ್ಲಿ ನೆಲೆಸಿರುವ 33 ವರ್ಷದ ಸಂತ್ರಸ್ತೆ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ನೇಹಿತೆಯೊಬ್ಬರ ಮುಖಾಂತರ ಹೇಮಂತ್ ಭಟ್ ಪರಿಚಿತನಾಗಿದ್ದ. ‘ನಿಮ್ಮ ದೇಹದಲ್ಲಿ15 ಆತ್ಮಗಳಿವೆ. ಅವುಗಳನ್ನು ದೇಹದಿಂದ ಓಡಿಸಬೇಕಾದರೆ ವಿಶೇಷ ಪೂಜೆ ಮಾಡಿಸಬೇಕು’ ಎಂದಿದ್ದ. ಜತೆಗೆ, ವಿಶೇಷ ಪೂಜೆ ಮಾಡಲು ಪ್ರತ್ಯೇಕ ಕೊಠಡಿ ಇರಬೇಕು. ವಿಶೇಷ ಪೂಜೆ ಹಾಗೂ ವಶೀಕರಣ ಮಾಡುವುದರಿಂದ ನಿಮ್ಮ ಆರೋಗ್ಯ ಸಮಸ್ಯೆ ಬಗೆಹರಿಯಲಿದೆ. ಜತೆಗೆ, ವಿವಾಹ ಯೋಗ ಕೂಡಿ ಬರಲಿದೆ ಎಂದು ಹೇಮಂತ್ ಭಟ್ ನೀಡಿದ್ದ ಭರವಸೆಯನ್ನು ಸಂತ್ರಸ್ತೆ ನಂಬಿದ್ದರು. ಜತೆಗೆ, ಹೇಮಂತ್ ಸೂಚನೆಯಂತೆ ಹಂತ- ಹಂತವಾಗಿ 5.19 ಲಕ್ಷ ರೂ. ನೀಡಿದ್ದರು.
ಸಮಸ್ಯೆಯಿಂದ ಮುಕ್ತಿ ಹೊಂದುವ ಸಲುವಾಗಿ ಸಂತ್ರಸ್ತೆ ಹೇಮಂತ್ ಭಟ್ನನ್ನು ನಗರಕ್ಕೆ ಕರೆಸಿದ್ದಳು. ಹೋಟೆಲ್ವೊಂದರಲ್ಲಿ ಕೊಠಡಿ ಬುಕ್ ಕಾಯ್ದಿರಿಸಿ ತನ್ನಿಬ್ಬರು ಸ್ನೇಹಿತೆಯರ ಜತೆ ತೆರಳಿದ್ದರು. ಕೊಠಡಿಯಲ್ಲಿ ಧೂಪ ಹಾಕಿ ನಿಂಬೆ ಹಣ್ಣು ಕತ್ತರಿಸಿ ಪೂಜೆ ನೆರವೇರಿಸಿದ್ದ ಹೇಮಂತ್, ಇನ್ನು ಮುಂದೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದಿದ್ದನು.