ಕೋಟ: ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಪಾದಚಾರಿಯೋರ್ವ ಮೃತಪಟ್ಟು ಇನ್ನೊರ್ವ ಗಂಭೀರ ಗಾಯಗೊಂಡ ಘಟನೆ ಜ.16 ರಂದು ಶುಕ್ರವಾರ ರಾತ್ರಿ 10:30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಸಾಲಿಗ್ರಾಮದ ರಶಿ ಆಟೋ ವೆಲ್ಡಿಂಗ್ ವರ್ಕ್ಸ್ ಅಂಗಡಿಯ ಬಳಿ ಸಂಭವಿಸಿದೆ.
ಮೃತರನ್ನು ಆರೂರು ಗ್ರಾಮದ ಕುಂಜಾಲು ಪ್ರದೀಪ್ ಆಚಾರ್ಯ (40) ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ವ್ಯಕ್ತಿ ರಾಯಚೂರು ಶಶಿ (25) ಎಂದು ತಿಳಿದು ಬಂದಿದೆ.
ಆರೋಪಿತ ವಾಹನವನ್ನು ಮಾರುತಿ ಈಕೋ ಕಾರು ಎಂದು ಗುರುತಿಸಲಾಗಿದೆ.
ಪ್ರದೀಪ್ ಆಚಾರ್ಯ ಮತ್ತು ಶಶಿ ಅವರು ಕುಂಜಾಲಿನಿಂದ ಜ.16 ರಂದು ಸಾಲಿಗ್ರಾಮ ಜಾತ್ರೆ ಪ್ರಯುಕ್ತ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಕಾರಿನಲ್ಲಿ ಬಂದು ಕಾರನ್ನು ಕಾರ್ಕಡ ಸರಕಾರಿ ಪ್ರಾಥಮಿಕ ಶಾಲೆಯ ಎದುರು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಗುರುನರಸಿಂಹ ದೇವಸ್ಥಾನದ ಜಾತ್ರೆಗೆ ಹೋಗಿ ರಾತ್ರೆವರೆಗೆ ಹಬ್ಬದಲ್ಲಿ ತಿರುಗಾಡಿಕೊಂಡು ವಾಪಸು ಮನೆಗೆ ಹೋಗಲೆಂದು ರಾತ್ರಿ 10:30 ರ ಸುಮಾರಿಗೆ ಪ್ರದೀಪ್ ಆಚಾರ್ಯ ಮತ್ತು ಶಶಿ ರಸ್ತೆಯ ಬದಿಯಲ್ಲಿ ನಡೆದು ಕೊಂಡು ಹೋಗುತ್ತಿದ್ದ ವೇಳೆ ಸಾಲಿಗ್ರಾಮದ ರಶಿ ಆಟೋ ವೆಲ್ಡಿಂಗ್ ವರ್ಕ್ಸ್ ಅಂಗಡಿಯ ಬಳಿ ವಿರುದ್ಧ ದಿಕ್ಕಿನಿಂದ ಅತೀ ವೇಗ ಹಾಗೂ ಅಜಾಗರೂಕತೆ ಚಲಾಯಿಸಿಕೊಂಡು ಬಂದ ಮಾರುತಿ ಈಕೋ ಕಾರು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ಪ್ರದೀಪ್ ಗೆ ತಲೆ ಹಾಗೂ ಕಾಲಿಗೆ ಬಲವಾದ ಗಾಯವಾಗಿದ್ದು, ಶಶಿ ಗೆ ಹೊಟ್ಟೆ ಮತ್ತು ಬೆನ್ನಿಗೆ ಗಾಯಗಳಿರುತ್ತದೆ. ತಕ್ಷಣ ಸ್ಥಳೀಯರು ಗಾಯ ಗೊಂಡವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿ ಪ್ರದೀಪ್ ಆಚಾರ್ಯ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಅಪಘಾತವೆಸಗಿ ಪರಾರಿಯಾದ ವಾಹನ ಮತ್ತು ಚಾಲಕನ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.



