Home Dskshina Kannada ಮುಲ್ಕಿ: ಕಂಬಳದ ಗದ್ದೆಯಂತಾಗಿರುವ ಕೊಳಚಿಕಂಬಳ ರಸ್ತೆ…!!

ಮುಲ್ಕಿ: ಕಂಬಳದ ಗದ್ದೆಯಂತಾಗಿರುವ ಕೊಳಚಿಕಂಬಳ ರಸ್ತೆ…!!

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸರ್ಫೀಂಗ್‌ ನಲ್ಲಿ ಅಂತರಾಷ್ತ್ರೀಯ ಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿರುವ,ನಮ್ಮ ದೇಶದಲ್ಲಿ ಪ್ರಥಮ ಬಾರಿಗೆ ಸರ್ಫೀಂಗ್‌ ಕ್ರೀಡೆಯನ್ನು ಆರಂಭಿಸಿರುವ ಮಂತ್ರ ಸರ್ಫೀಂಗ್‌ ಅನ್ನು ಹೊಂದಿರುವಂತಹ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಬಪ್ಪನಾಡು ಗ್ರಾಮದ ಕಟ್ಟದಂಗಡಿಯಿಂದ ಕೊಳಚಿಕಂಬಳ,ಪಡುಬ್ಯೆಲುಗೆ ಸಂಪರ್ಕ ಕಲ್ಪಿಸುವಂತ ಒಳ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಸುಮಾರು 2 ಕಿ.ಮಿ ರಸ್ತೆಯು ಸಂಪೂರ್ಣ ಕಿತ್ತು ಹೋಗಿ,ಅಲ್ಲಲ್ಲಿ ಹೊಂಡಗಳಿಂದ ತುಂಬಿದ್ದು ಇದನ್ನು ರಸ್ತೆಯೆನ್ನುವ ಬದಲಿಗೆ ಕಂಬಳದ ಗದ್ದೆಯೆಂದು ಕರೆಯುವಂತಾಗಿದೆ.

ಮುಲ್ಕಿ ನಗರ ಪಂಚಾಯತ್‌ ಗೆ ಮೂರು ಮಂದಿ ಅಧ್ಯಕ್ಷರನ್ನು ನೀಡಿದಂತಹ ಮೂಲ್ಕಿಯ ಬಪ್ಪನಾಡು ಗ್ರಾಮದ ವಾರ್ಡಿನ ಸದಸ್ಯರ ನಿರ್ಲಕ್ಷದಿಂದಾಗಿ ಕಳೆದ ಸುಮಾರು ಹಲವಾರು ವರ್ಷಗಳಿಂದ ಹಂತ,ಹಂತವಾಗಿ ಹೊಂಡಗಳು ಬಿದ್ದು ಇದೀಗ ಮಳೆ ಬಂದಾಗ ನೀರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಸಾಧ್ಯವಾಗಿದೆ,ಮುಲ್ಕಿಯ ಬಪ್ಪನಾಡು ದೇವಳಕ್ಕೆ ಸಂಬಂಧ ಪಟ್ಟ ಶ್ರೀ ಜಾರಂದಾಯ ದ್ಯೆವಸ್ತಾನವನ್ನು ಹೊಂದಿರುವಂತಹ ಕೊಳಚಿಕಂಬಳದಲ್ಲಿ ಸುಮಾರು ನೂರಕ್ಕೂ ಮಿಕ್ಕಿ ಮನೆಗಳಿದ್ದು ಇಲ್ಲಿ ಹೆಚ್ಚಿನವರು ಮುಲ್ಕಿ ಸೇರಿದಂತೆ ದೂರದ ಪ್ರದೇಶಕ್ಕೆ ಉದ್ಯೋಗಕ್ಕೆ , ಹೋಗವವರು, ಶಾಲೆಯ ಮಕ್ಕಳು ಪ್ರತಿದಿನ ಈ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.

ಅಂತರಾಷ್ತ್ರೀಯ ಮಟ್ಟದಲ್ಲಿ ಸರ್ಫಿಂಗ್‌ ನಲ್ಲಿ ಪ್ರಸಿದ್ದಿಯನ್ನು ಪಡೆದಿರುವ ಸಮುದ್ರ ತೀರ ಮತ್ತು ನದಿಯನ್ನು ಹೊಂದಿರುವ ಮಂತ್ರ ಸರ್ಫಿಂಗ್‌ ನಲ್ಲಿ ತರಬೇತಿ ಪಡೆಯಲು ದೇಶ,ವಿದೇಶಗಳಿಂದ ಹೆಚ್ಚಿನ ಮಂದಿ ಬರುತ್ತಿದ್ದು ,ಕೆಲವರು ತರಬೇತಿ ಮುಗಿಯುವ ತನಕ ಇಲ್ಲೆ ವಾಸವಾಗಿರುತ್ತಾರೆ.ಇಲ್ಲಿಯ ರಸ್ತೆ ಅವ್ಯವಸ್ತೆಯಿಂದಾಗಿ ಅವರಿಗೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.ಕೊಳಚಿಕಂಬಳ ಪ್ರದೇಶದಲ್ಲಿ ಶಾಂಭವಿ ನದಿ,ನಂದಿನಿ ನದಿ ಮತ್ತು ಅರಬ್ಬಿ ಸಮುದ್ರ ಸೇರುವ ಅಳಿವೆ ಪ್ರದೇಶವಿದ್ದು ಪ್ರತಿ ದಿನ ಸಂಜೆ ಹೆಚ್ಚಿನ ಮಂದಿ ಅಳಿವೆಯ ಸೊಬಗನ್ನು ನೋಡಲು ಬರುತ್ತಿದ್ದಾರೆ.

ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಈ ಪ್ರದೇಶದ ಬಗ್ಗೆ ಈವರೆಗೆ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸುತ್ತಿಲ್ಲ.ಕೊಳಚಿಕಂಬಳದ ಬಳಿ ಸಮುದ್ರದಲ್ಲಿ ನೀರಿನ ಇಳಿತ ಸಂದರ್ಭದಲ್ಲಿ ನಡೆದುಕೊಂಡು ಸಸಿಹಿತ್ಲು ಮುಂಡಾ ಬೀಚ್‌ ಹೋಗಲು ಸಾಧ್ಯವಿದ್ದು ಹತ್ತಿರದಲ್ಲಿ ಉಡುಪಿ ಜಿಲ್ಲೆಯ ಹೆಜಮಾಡಿ ಸಮೀಪದ ನಡಿಕುದ್ರು ಬಳಿ ಸಮುದ್ರ ತೀರದಲ್ಲಿ ಕಿರು ಬಂದರು ಆಗುತ್ತಿದ್ದು ಬಂದರಿನ ಕಾಮಗಾರಿ ನಡೆಯುತ್ತಿದೆ.ಮಳೆಗಾಲದ ಸಂದರ್ಭದಲ್ಲಿ ಕಟ್ಟದಂಗಡಿಯಿಂದ ಕೊಳಚಿಕಂಬಳದವರೆಗೆ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿದ್ದು ಜೊತೆಗೆ ನಡೆದುಕೊಂಡು ಹೋಗುವವರಿಗೆ ವಾಹನಗಳ ಕೆಸರು ನೀರಿನ ಸ್ಪರ್ಶವಾಗುತ್ತಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಕೊಳಚಿಕಂಬಳ ರಸ್ತೆಯ ದುರಸ್ತಿ ಬಗ್ಗೆ ಗಮನ ಹರಿಸಬೇಕೆಂದು ಸ್ತಳೀಯರು ಅಗ್ರಹಿಸಿದ್ದಾರೆ. ರಸ್ತೆಯ ಅಭಿವೃದ್ದಿಯನ್ನು ಕಡೆಗಣಿಸಿದಲ್ಲಿ ಮುಂದೆ ಬರುವ ಚುನಾವಣೆಗಳನ್ನು ಬಹಿಷ್ಕರಿಸಲು ಗ್ರಾಮಸ್ತರು ಮುಂದಾಗಿದ್ದಾರೆ.