ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಕೆಲಸಕ್ಕೆಂದು ಹೋಗಿ ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ “ಗಂಡಸು ಕಾಣೆ” ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿ ಯಮನಪ್ಪ ಮಾದರ್ ಎಂದು ತಿಳಿದು ಬಂದಿದೆ.
ಪಿರ್ಯಾದಿದಾರರಾದ ಬಸಮ್ಮ ಮಾದರ್ 35, ಇವರು ಮೂಲತಃ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಟಕನಕೇರಿಯವರು. ಕಳೆದ 4 ವರ್ಷಗಳಿಂದ ಕಾಪು ತಾಲೂಕು ಪಡುಬಿದ್ರಿ ಬೇಂಗ್ರೆಯ ಅಬ್ದುಲ್ ಗಫೂರ್ ಅವರ ಬಾಡಿಗೆ ಮನೆಯಲ್ಲಿ ಪತಿ ಯಮನಪ್ಪ ಮಾದರ್ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾರೆ. ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಬಸಮ್ಮ ಅವರ ಪ್ರಕಾರ ಪತಿ ಯಮನಪ್ಪ ಮನೆ ಖರ್ಚಿಗೆ ಹಣ ನೀಡದೇ ಮನೆಯಲ್ಲಿ ಆಗಾಗ ಕಿರಿಕಿರಿ ಮಾಡುತ್ತಿದ್ದರು.
09/08/2026 ರಂದು ಬೆಳಿಗ್ಗೆ 7:30ಕ್ಕೆ ಕೆಲಸಕ್ಕೆಂದು ಹೊರಟು ಹೋದ ಯಮನಪ್ಪ ಮಾದರ್ 40, ಸಂಜೆಯಾದರೂ ಮನೆಗೆ ವಾಪಾಸು ಬಂದಿಲ್ಲ. ಪತ್ನಿ ಬಸಮ್ಮ ಅವರು ಕೆಲಸ ಮಾಡುವ ಕಡೆಗಳಲ್ಲಿ ಮತ್ತು ಸ್ನೇಹಿತರ ಬಳಿ ವಿಚಾರಿಸಿ ಹುಡುಕಾಟ ನಡೆಸಿದ್ದಾರೆ.
4 ವರ್ಷದ ಹಿಂದೆಯೂ ಇದೇ ರೀತಿ ಯಮನಪ್ಪ ಮನೆ ಬಿಟ್ಟು ಹೋಗಿದ್ದು, 15 ದಿನದ ಬಳಿಕ ವಾಪಾಸು ಬಂದಿದ್ದರು. ಅದೇ ರೀತಿ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ಭಾವಿಸಿ ಮೊದಲು ದೂರು ನೀಡಿರಲಿಲ್ಲ.
ಈ ಸಂಬಂಧ ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2026 ರಂತೆ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.




