ಬೈಂದೂರು: ಕರವಳಿ ಭಾಗದ ಇತಿಹಾಸ ಪ್ರಸಿದ್ಧ ಕಾರ್ಮಿಕ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮರವಂತೆಯ ಶ್ರೀ ವರಾಹಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ನಡೆಯುವ ಕರ್ಕಾಟಕ ಅಮಾವಾಸ್ಯೆ (ಭೀಮನ ಅಮಾವಾಸ್ಯೆ) ಜಾತ್ರಾ ಮಹೋತ್ಸವದಲ್ಲಿ ಈ ಬಾರಿ ಭಾರೀ ಅವ್ಯವಸ್ಥೆ ಎದ್ದು ಕಾಣುತ್ತಿದ್ದು, ಭಕ್ತಾದಿಗಳು ಹಾಗೂ ಸ್ಥಳೀಯರು ಆಡಳಿತ ಮಂಡಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತ್ರೆಯಲ್ಲಿ ಕಂಡುಬಂದ ಪ್ರಮುಖ ಅವ್ಯವಸ್ಥೆಗಳು:
ಕಗ್ಗತ್ತಲೆಯಲ್ಲಿ ದೇವಾಲಯ:
ವರ್ಷಕ್ಕೊಮ್ಮೆ ಜರುಗುವ ಪವಿತ್ರ ಜಾತ್ರಾ ಮಹೋತ್ಸವಕ್ಕೆ ದೇವಾಲಯಕ್ಕೆ ಹಾಗೂ ಸುತ್ತಮುತ್ತಲಿನ ಆವರಣಕ್ಕೆ ಸೂಕ್ತ ವಿದ್ಯುತ್ ದೀಪಾಲಂಕಾರ (Lighting) ಮಾಡದೆ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ.ಕುಡಿಯುವ ನೀರು ಮತ್ತು ಶೌಚಾಲಯ ಬಂದ್: ದರ್ಶನಕ್ಕೆ ಬರುವ ಭಕ್ತರಿಗೆ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ.
ಇದ್ದ ಶೌಚಾಲಯಗಳಿಗೂ ಬೀಗ ಹಾಕಿ ಬಂದ್ ಮಾಡಲಾಗಿದ್ದು, ಮಹಿಳೆಯರು, ವೃದ್ಧರು ಹಾಗೂ ಮಗು-ಮಕ್ಕಳು ತೀವ್ರ ಪರದಾಡುವಂತಾಯಿತು.
ಪ್ರವಾಸೋದ್ಯಮ ಇಲಾಖೆ ಜಾಗದಲ್ಲಿ ವಸೂಲಿ: ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗದಲ್ಲಿ ವ್ಯಾಪಾರಸ್ಥರಿಗೆ ಜಾಗ ನೀಡಿ ಹಣ ವಸೂಲಿ ಮಾಡಿದ ಆಡಳಿತ ಮಂಡಳಿಯು, ಅಲ್ಲಿರುವ ಶೌಚಾಲಯಕ್ಕೂ ಬೀಗ ಜಡಿದಿದೆ. ದೂರದೂರುಗಳಿಂದ ಬಂದ ವ್ಯಾಪಾರಿಗಳು/ವರ್ತಕರು ಶೌಚಾಲಯವಿಲ್ಲದೆ ಆಕ್ರೋಶ ಹೊರಹಾಕಿದ್ದಾರೆ.
ಶೋಕಿಗೇನೂ ಕಮ್ಮಿ ಇಲ್ಲ ಎಂಬಂತೆ!! * ‘ವಾಕಿ-ಟಾಕಿ’ ಶೋ ಬಿಟ್ಟರೆ ಕೆಲಸವಿಲ್ಲ: ಕೈಯಲ್ಲಿ ವಾಕಿ-ಟಾಕಿ ಹಿಡಿದು ಶೋ ಮಾಡುವುದಷ್ಟೇ ಆಡಳಿತ ಮಂಡಳಿಯ ಕೆಲಸವಾಯಿತೇ ಹೊರತು, ಸಾರ್ವಜನಿಕರಿಗೆ ಯಾವುದೇ ಅನುಕೂಲ ಮಾಡಿಕೊಡಲಿಲ್ಲ ಎಂಬುದು ಭಕ್ತರ ನೇರ ಆರೋಪ.
ಅನುಭವದ ಕೊರತೆ ಹಾಗೂ ಸಂಪರ್ಕಕ್ಕೆ ಸಿಗದ ದೇವಸ್ಥಾನದ ಆಡಳಿತ ಮಂಡಳಿ ಸಮಿತಿಯ ಅಧ್ಯಕ್ಷ ರಾಜೇಶ್ ಹೆಬ್ಬಾರ್ ರವರ ಆಡಳಿತ ಮಂಡಳಿಗೆ ಜಾತ್ರೆ ನಡೆಸುವ ಕನಿಷ್ಠ ಅನುಭವವೂ ಇದ್ದಂತಿಲ್ಲ. ಸಾರ್ವಜನಿಕರು ಅಥವಾ ಭಕ್ತರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹೋದರೆ ಭಕ್ತರ ಸಂಪರ್ಕಕ್ಕೇ ಸಿಗದೆ, ಯಾರ ಮಾತನ್ನೂ ಕೇಳದೆ ಜಾರಿಕೊಳ್ಳುವ ವರ್ತನೆ ತೋರಿದ್ದಾರೆ.
ಸಾರ್ವಜನಿಕರ ಆಗ್ರಹ:
ಕರ್ಕಾಟಕ ಅಮಾವಾಸ್ಯೆ ಜಾತ್ರೆಗೆ ಒಂದು ದಿನಕ್ಕೆ ಲಕ್ಷಾಂತರ ಜನರು ಆಗಮಿಸುತ್ತಾರೆ, ಲಕ್ಷಾಂತರ ರೂಪಾಯಿ ಕಾಣಿಕೆ ಹಾಗೂ ವ್ಯಾಪಾರಿಗಳಿಂದ ಬಾಡಿಗೆ ವಸೂಲಿ ಮಾಡುವ ಆಡಳಿತ ಮಂಡಳಿಯ ಈ ಉಡಾಫೆ ಮತ್ತು ನಿರ್ಲಕ್ಷ್ಯದ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತಕ್ಷಣ ಮಾನ್ಯ ಉಡುಪಿ ಜಿಲ್ಲಾಧಿಕಾರಿಗಳು ಶಾಸಕರು ಜನಪ್ರತಿನಿಧಿಗಳು ಧಾರ್ಮಿಕ ಮುಖಂಡರು ಸೇರಿದಂತೆ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ, ಅನುಭವವಿಲ್ಲದ ಈ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಭಕ್ತರು ಒತ್ತಾಯಿಸಿದ್ದಾರೆ.







