ಮಂಗಳೂರು : ಯುವತಿಯೊಬ್ಬಳು ತನ್ನ ಸ್ನೇಹಿತೆಯ ಜೊತೆಗೆ ಸ್ಕೂಟರಿನಲ್ಲಿ ಬಂದು ಗುರುಪುರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೂಡುಬಿದ್ರೆ ಗಾಂಧಿನಗರ ಬಳಿಯ ಕಡೇಪಲ್ಲ ನಿವಾಸಿ ನವ್ಯಾ (20) ಮೃತ ಯುವತಿ ಎಂದು ತಿಳಿದು ಬಂದಿದೆ.
ಆಲಂಕಾರು ಪೇಟೆಯ ಜುವೆಲ್ಲರಿ ಒಂದರಲ್ಲಿ ಕೆಲಸಕ್ಕಿದ್ದ ಯುವತಿ ನಿಡ್ಡೋಡಿ ಮೂಲದ ಸ್ನೇಹಿತೆಯೊಂದಿಗೆ ಸ್ಕೂಟರಿನಲ್ಲಿ ಗುರುಪುರಕ್ಕೆ ಬಂದಿದ್ದರು.
ಮಧ್ಯಾಹ್ನ ವೇಳೆಗೆ ಗುರುಪುರ ಸೇತುವೆ ಬಳಿ ತಲುಪಿದಾಗ ಸ್ಕೂಟರ್ ನಿಲ್ಲಿಸಿ ತಾನು ನದಿಗೆ ಹಾರುತ್ತೇನೆಂದು ಹೇಳಿ ಹಾರಿದ್ದಾಳೆ. ಈ ವೇಳೆ ಜೊತೆಗಿದ್ದ ಯುವತಿ ಕೈ ಹಿಡಿದು ಎಳೆಯಲು ಪ್ರಯತ್ನಿಸಿದ್ದು ಆಕೆಯನ್ನು ದೂಡಿ ನದಿಗೆ ಹಾರಿದ್ದಾಳೆ.
ಮೂಡುಬಿದ್ರೆ ಪೊಲೀಸರ ಪ್ರಕಾರ, ಯುವತಿ ಪರಿಶಿಷ್ಟ ಜಾತಿಯವಳಾಗಿದ್ದು ಮಳಲಿ ನಿವಾಸಿ ಮನೋಜ್ ಪೂಜಾರಿ ಎಂಬಾತನನ್ನು ಪ್ರೀತಿಸುತ್ತಿದ್ದಳು.
ಪ್ರೀತಿಸುತ್ತೇನೆಂದು ಹೇಳಿ ಸುತ್ತಾಟ ನಡೆಸಿ ಈಗ ಮದುವೆಯಾಗುವುದಿಲ್ಲ ಎಂದು ಹೇಳಿ ವಂಚಿಸಿದ್ದಾನೆ. ಈ ಬಗ್ಗೆ ಯುವತಿ ಡೆತ್ ನೋಟ್ ಬರೆದಿಟ್ಟಿದ್ದು ಇಂದು ಮಧ್ಯಾಹ್ನ ಆತನನ್ನು ಭೇಟಿಯಾಗಲು ಗುರುಪುರಕ್ಕೆ ಬಂದಿದ್ದಳು. ಆದರೆ ಮನೋಜ್ ಫೋನ್ ಸ್ವೀಕರಿಸದೇ ಇದ್ದುದರಿಂದ ಬೇಸರಗೊಂಡಿದ್ದು ಅತನಿಗೆ ಸಾಯುವುದಾಗಿ ಮೆಸೇಜ್ ಮಾಡಿ ನದಿಗೆ ಹಾರಿದ್ದಾಳೆ. ಪೊಲೀಸರು ಆರೋಪಿ ವಿರುದ್ಧ ಕೇಸು ದಾಖಲಿಸುವ ಸಾಧ್ಯತೆಯಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೇ ವೇಳೆ, ಕಾಂಗ್ರೆಸ್ ಮುಖಂಡ ಮಿಥುನ್ ರೈ ಬಂದಿದ್ದು ತುರ್ತಾಗಿ ಅಗ್ನಿಶಾಮಕ ದಳವನ್ನು ಕರೆಸಿ ಶವ ಶೋಧಕ್ಕೆ ನೆರವು ನೀಡಿದ್ದಾರೆ. ಕೆಲ ಹೊತ್ತಿನಲ್ಲೇ ಹುಡುಗಿಯ ಶವವನ್ನು ಮೇಲೆತ್ತಿದ್ದಾರೆ.





