ಉಡುಪಿ : ರೈಲ್ವೆ ಕಾಮಗಾರಿ ಗುತ್ತಿಗೆಗೆ ಸಂಬಂಧಿಸಿದಂತೆ ಸುಮಾರು 94.81 ಲಕ್ಷ ರೂಪಾಯಿ ವಂಚನೆ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕನ್ನರ್ಪಾಡಿಯ ಗುತ್ತಿಗೆದಾರ ಹೃಷಿಕೇಶ್ ಜೆ. ಶೆಟ್ಟಿ ನೀಡಿದ ದೂರಿನ ಪ್ರಕಾರ, ಕೊಂಕಣ ರೈಲ್ವೆಯ ಕುಮಟಾ, ಗೋಕರ್ಣ ಸೇರಿದಂತೆ ಹೆಚ್ಚುವರಿ ಕಾಮಗಾರಿಗಳನ್ನು ಉಪಗುತ್ತಿಗೆ ಆಧಾರದಲ್ಲಿ ಪೂರ್ಣಗೊಳಿಸಿದ್ದರೂ, ಒಪ್ಪಂದದಂತೆ ಪಾವತಿಸಬೇಕಿದ್ದ 94 ಲಕ್ಷ 81 ಸಾವಿರ 554 ರೂಪಾಯಿ ಹಣವನ್ನು ಪಿ. ರಾಮಚಂದ್ರ ನೀಡಿಲ್ಲ ಎಂದು ಆರೋಪಿಸಲಾಗಿದೆ.
ಪದೇಪದೆ ಮನವಿ ಮಾಡಿದರೂ ಬಾಕಿ ಹಣ ಪಾವತಿಸದೇ ಉದ್ದೇಶಪೂರ್ವಕವಾಗಿ ಆರ್ಥಿಕ ನಷ್ಟ ಉಂಟುಮಾಡಿ ಮೋಸ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 105/2026 ದಾಖಲಿಸಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318 ಮತ್ತು 316ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




