ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಪೊರ್ಲೊಟ್ಟುಗುತ್ತು ಕುಬೇರ ಕೋಳಿ ಫಾರ್ಮ್ ಸಮೀಪದ ಸರ್ಕಾರಿ ಹಾಡಿ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಕಾಳಗ ನಡೆಸಿ ಜೂಜಾಟ ಆಡುತ್ತಿದ್ದ ಸ್ಥಳದ ಮೇಲೆ ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ನಡೆಸಿದ್ದಾರೆ.
ಪೊಲೀಸ್ ಉಪನಿರೀಕ್ಷಕ (ತನಿಖೆ) ಶಿವಕುಮಾರ್ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಸಂಜೆ 5.45ರ ಸುಮಾರಿಗೆ ದಾಳಿ ನಡೆಸಿದ ವೇಳೆ ರಕ್ಷಿತ್ ಶೆಟ್ಟಿ, ಪ್ರವೀಣ ದೇವಾಡಿಗ ಹಾಗೂ ಇತರರು ಕೋಳಿಗಳ ಕಾಲಿಗೆ ಹರಿತವಾದ ಚೂರಿಗಳನ್ನು ಕಟ್ಟಿ, ಅವುಗಳ ಮೇಲೆ ಹಣವನ್ನು ಪಣವಾಗಿಟ್ಟು ಜೂಜಾಟ ನಡೆಸುತ್ತಿರುವುದು ಪತ್ತೆಯಾಗಿದೆ.
ದಾಳಿ ವೇಳೆ ಸುಮಾರು ₹12,000 ಮೌಲ್ಯದ ಐದು ಜೀವಂತ ಕೋಳಿಗಳು, ಕೋಳಿಗಳನ್ನು ಕಟ್ಟಲು ಬಳಸಿದ್ದ ಐದು ಹಗ್ಗಗಳು ಹಾಗೂ ₹4,370 ನಗದುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 100/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112(1), ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 87, 93 ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960ರ ಕಲಂ 11(1)(ಎನ್) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.




