ಉಡುಪಿ-ಕಳೆದ ಹಲವು ವಾರಗಳಿಂದ ಸ್ಥಗಿತಗೊಂಡಿರುವ ನಮೂನೆ 11ಎ ಮತ್ತು 11 ಬಿ ತಿದ್ದುಪಡಿ ಸೇವೆಯನ್ನು ತಕ್ಷಣ ಪುನರಾರಂಭಿಸುವಂತೆ ಕಂದಾಯ ಸಚಿವ ಈಶ್ವರ್ ಖಂಡ್ರೆ ಯವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಪತ್ರ ಬರೆದು ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯಿತಿಗಳಿಂದ ನೀಡಲಾಗುವ ನಮೂನೆ 11ಎ ಹಾಗೂ 11ಬಿಗಳಲ್ಲಿ ಕಣ್ತಪ್ಪಿನಿಂದ ಉಂಟಾಗುವ ಸಣ್ಣಪುಟ್ಟ ದೋಷಗಳನ್ನು ಈವರೆಗೆ ಗ್ರಾಮ ಪಂಚಾಯಿತಿಗಳ ಮೂಲಕ ಆನ್ಲೈನ್ನಲ್ಲಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳ ಅನುಮೋದನೆ ಪಡೆದು ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ, ಕಳೆದ ಮೂರು ವಾರದಿಂದ ಕಾರ್ಯನಿರ್ವಹಣಾಧಿಕಾರಿಗಳ ಲಾಗಿನ್ನಲ್ಲಿ ಈ ಸೇವೆಯನ್ನು ತಂತ್ರಾಂಶದಲ್ಲಿ ಸ್ಥಗಿತಗೊಳಿಸಿರುವ ಪರಿಣಾಮ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ತಾಂತ್ರಿಕ ಸಮಸ್ಯೆಯಿಂದ ನಮೂನೆಗಳಲ್ಲಿನ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ನಿವೇಶನ ಹಾಗೂ ಮನೆಗಳ ನೋಂದಣಿ ಪ್ರಕ್ರಿಯೆಗಳು ಸ್ಥಗಿತವಾಗಿದ್ದು, ಸಾರ್ವಜನಿಕರು ಅನಗತ್ಯ ತೊಂದರೆ ಅನುಭವಿಸುವಂತಾಗಿದೆ. ವಿಶೇಷವಾಗಿ ಪರರಾಜ್ಯ ಹಾಗೂ ವಿದೇಶಗಳಿಂದ ತಮ್ಮ ಆಸ್ತಿ ಸಂಬಂಧಿತ ಕೆಲಸಗಳಿಗಾಗಿ ಕ್ಷೇತ್ರಕ್ಕೆ ಆಗಮಿಸಿರುವವರು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ, ಸಂಬಂಧಿತ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳಿಗೆ ಪತ್ರ ಬರೆದು ನಮೂನೆ 11ಎ ಮತ್ತು 11ಬಿ ತಿದ್ದುಪಡಿ ಸೇವೆಯನ್ನು ಕೂಡಲೇ ಪುನರಾರಂಭಿಸುವಂತೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ರವರು ರಾಜ್ಯ ಸರಕಾರಕ್ಕೆ ಆಗ್ರಹಿಸಿದ್ದಾರೆ.




