ಉಳ್ಳಾಲ: ಕಾರು ಢಿಕ್ಕಿ ಹೊಡೆದು ಮಹಿಳೆಯೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕುತ್ತಾರ್ ಸಮೀಪದ ಪಂಡಿತ್ ಹೌಸ್ ಬಳಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಪಂಡಿತ್ ಹೌಸ್ ನಿವಾಸಿ ಪೂರ್ಣಿಮಾ (59) ಎಂದು ಗುರುತಿಸಲಾಗಿದೆ.
ಬಸ್ನಿಂದ ಇಳಿದು ರಸ್ತೆ ದಾಟುವ ಸಂದರ್ಭ ವೈದ್ಯಕೀಯ ವಿದ್ಯಾರ್ಥಿ ಚಲಾಯಿಸುತ್ತಿದ್ದ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮ ಪೂರ್ಣಿಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೂರ್ಣಿಮಾ ಅವರ ಬಾವನ ಪುತ್ರನ ವಿವಾಹ ಸಮಾರಂಭವಿತ್ತು. ಆ ಪ್ರಯುಕ್ತ ಮದುವೆ ಮನೆಗೆ ತೆರಳಿ ವಾಪಸ್ಸಾಗುವಾಗ ದುರಂತ ಸಂಭವಿಸಿದೆ.
ನೂತನವಾಗಿ ಡಾಮರೀಕರಣ ನಡೆಸಿದ ರಸ್ತೆಯ ನಡುವೆ ಇರುವ ಹೊಂಡ ತಕ್ಷಣಕ್ಕೆ ಗೋಜಿಗೆ ಬರುತ್ತಿಲ್ಲ. ಇದರಿಂದ ಕಾರು ಚಾಲಕ ಆಯತಪ್ಪಿ ಮಹಿಳೆಗೆ ಢಿಕ್ಕಿ ಹೊಡೆದಿದ್ದಾನೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ.