Home Crime ಕಾರ್ಕಳ-ಶಿವತಿಕೆರೆ ಬಳಿ ಸ್ಕೂಟಿ – ಬೈಕ್ ನಡುವೆ ಅಪಘಾತ : ಕಂದಾಯ ನಿರೀಕ್ಷಕರಿಗೆ ಗಂಭೀರ ಗಾಯ..!!

ಕಾರ್ಕಳ-ಶಿವತಿಕೆರೆ ಬಳಿ ಸ್ಕೂಟಿ – ಬೈಕ್ ನಡುವೆ ಅಪಘಾತ : ಕಂದಾಯ ನಿರೀಕ್ಷಕರಿಗೆ ಗಂಭೀರ ಗಾಯ..!!

ಕಾರ್ಕಳ : ನಗರದ ಶಿವತಿಕೆರೆ ಬಳಿ ಭಾನುವಾರ ನಡೆದ ಬೈಕ್‌ ಅಪಘಾತದಲ್ಲಿ ಸ್ಕೂಟಿ ಸವಾರ ತಾಲೂಕು ಕಚೇರಿ ಕಂದಾಯ ನಿರೀಕ್ಷಕ (RI) ಶಿವಪ್ರಸಾದ್‌ ರಾವ್ ನಂದಳಿಕೆ ಅವರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರು ಮಣಿಪಾಲ ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿವಪ್ರಸಾದ್ ರಾವ್ ಭಾನುವಾರ ಸಂಜೆ ಕಾರ್ಕಳ ತಾಲೂಕು ಕಚೇರಿಯಲ್ಲಿ ಎಸ್‌ಐಆರ್ ಮೀಟಿಂಗ್ ಗೆ ಹಾಜರಾಗಿ ರಾತ್ರಿ 7.30ರ ಸುಮಾರಿಗೆ ತನ್ನ ಮನೆಯಾದ ನಂದಳಿಕೆಗೆ ಸಾಗುತ್ತಿದ್ದ ವೇಳೆ ಶಿವತಿಕೆರೆ ಬಳಿಯ ಪೆಟ್ರೋಲ್ ಬಂಕ್ ಬಳಿ ಇಂಡಿಕೇಟರ್ ಹಾಕಿ ಯೂಟರ್ನ್ ತೆಗೆದುಕೊಳ್ಳಲು ಮುಂದಾದಾಗ ಹಿಂದಿನಿಂದ ವೇಗವಾಗಿ ಬಂದ ಬೈಕ್ ಸವಾರ ನಿಯಂತ್ರಣ ತಪ್ಪಿ ಶಿವಪ್ರಸಾದ್ ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಶಿವಪ್ರಸಾದ್ ರಾವ್ ಅವರ ತಲೆಗೆ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಅವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕರೆದೊಯ್ಯಲಾಯಿತು. ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ