Home Latest ಹಿರಿಯ ಪತ್ರಕರ್ತ, ಸಂಪಾದಕ ಪರಮಾನಂದ ಸಾಲ್ಯಾನ್  ನಿಧನ…!!

ಹಿರಿಯ ಪತ್ರಕರ್ತ, ಸಂಪಾದಕ ಪರಮಾನಂದ ಸಾಲ್ಯಾನ್  ನಿಧನ…!!

ಮಂಗಳೂರು: ಕರಾವಳಿಯ ಪತ್ರಿಕೋದ್ಯಮ, ರಂಗಭೂಮಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ದಶಕಗಳ ಕಾಲ , ಮೌಲ್ಯಯುತ ಧ್ವನಿಯಾಗಿ ಗುರುತಿಸಿಕೊಂಡಿದ್ದ ಹಿರಿಯ ಪತ್ರಕರ್ತ, ಸಂಪಾದಕ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು (65) ಅವರ ನಿಧನ ರಾಗಿದ್ದಾರೆ.

‘ಮುಂಗಾರು’ ಹಾಗೂ ‘ಹೊಸದಿಗಂತ’ದಂತಹ ಪ್ರಮುಖ ದಿನಪತ್ರಿಕೆಗಳಲ್ಲಿ ನಿಷ್ಠಾವಂತ ವರದಿಗಾರಿಕೆ ನಡೆಸಿದ್ದ ಅವರು, ‘ಅಜೇಯ’ ಮಾಸಪತ್ರಿಕೆಯ ಸಂಪಾದಕರಾಗಿ ಮೌಲ್ಯಭರಿತ ಪತ್ರಿಕೋದ್ಯಮವನ್ನು ಮುನ್ನಡೆಸಿದರು.

ಮಾಧ್ಯಮ ಲೋಕದಷ್ಟೇ ಆಳವಾಗಿ ಅವರು ರಂಗಭೂಮಿಯನ್ನೂ ಪ್ರೀತಿಸಿದ್ದರು. ಕರಾವಳಿಯಾದ್ಯಂತ ಧೂಳೆಬ್ಬಿಸಿ ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡ ಐತಿಹಾಸಿಕ ‘ಶಿವದೂತ ಗುಳಿಗ’ ತುಳು ನಾಟಕದ ಸಂಭಾಷಣೆಗಾರರಾಗಿ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು. ‘ರಂಗಸುದರ್ಶನ ಸಸಿಹಿತ್ಲು’ ಸಂಸ್ಥೆಯನ್ನು ಕಟ್ಟಿ, ಯುವ ಪ್ರತಿಭೆಗಳಿಗೆ ಆಸರೆಯಾಗಿದ್ದ ಸಮರ್ಥ ರಂಗ ನಿರ್ದೇಶಕರೂ ಹೌದು. ಅಕ್ಷರ ಮತ್ತು ರಂಗಕಲೆಯ ಜೊತೆಗೆ ಧಾರ್ಮಿಕ ವಲಯದಲ್ಲೂ ತೊಡಗಿಸಿಕೊಂಡಿದ್ದ ಸಾಲ್ಯಾನ್, ಸಸಿಹಿತ್ಲು ಶ್ರೀ ಸಾರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿ ಹಾಗೂ ಶ್ರೀ ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯಲ್ಲಿ ಸಕ್ರಿಯರಾಗಿ ದೈವಾರಾಧನೆಯ ಹಿನ್ನೆಲೆಯನ್ನು ಜನಸಾಮಾನ್ಯರಿಗೆ ಮನಮುಟ್ಟುವಂತೆ ತಲುಪಿಸಲು ಶ್ರಮಿಸಿದ್ದರು. ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.