ಉಡುಪಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರು ಜಯಕರ್ನಾಟಕ ಸ್ಥಾಪಕಾಧ್ಯಕ್ಷ ದಿ. ಮುತ್ತಪ್ಪ ರೈ ಮತ್ತು ಶಾಸಕ ವಿಶ್ವನಾಥ ಇವರ ಸಂಪರ್ಕವನ್ನು ಪ್ರಸ್ತಾಪಿಸಿ ಹಗುರವಾಗಿ ಮಾತನಾಡಿರುವುದನ್ನು ಉಡುಪಿ ಜಿಲ್ಲಾ ಜಯಕರ್ನಾಟಕ ಸಂಘಟನೆ ತೀವ್ರವಾಗಿ ಖಂಡಿಸಿದೆ.
ಸದಾನಂದ ಗೌಡರು ವಿಷಾದ ವ್ಯಕ್ತಪಡಿಸಿ ಕ್ಷಮೆ ಯಾಚಿಸದಿದ್ದರೆ ರಾಜ್ಯ ಸಂಘಟನೆಯ ನಿರ್ದೇಶನದಂತೆ ಕಾರ್ಯಪ್ರವೃತ್ತವಾಗುವುದೆಂದು ಉಡುಪಿ ಜಿಲ್ಲಾ ಜಯಕರ್ನಾಟಕ ಸಂಘಟನೆ ದಿನಾಂಕ 12.07.2026ರಂದು ಜುಲೈ 12 ರಂದು ಉಡುಪಿ ಕಿದಿಯೂರು ಹೋಟೆಲ್ನಲ್ಲಿ ಜರುಗಿದ ಸಭೆಯಲ್ಲಿ ಒಮ್ಮತದ ನಿರ್ಣಯ ಮಾಡಿತು.
ಜಿಲ್ಲಾಧ್ಯಕ್ಷ ಲೂವಿಸ್ ಎಂ. ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸದರಿ ಸಭೆಯಲ್ಲಿ ಸಂಘಟನೆಯ ವತಿಯಿಂದ ವಿವಿಧ ಜನಹಿತ ಕಾರ್ಯ ಮಾಡಿ ಜನತೆಯ ವಿಶ್ವಾಸ ಗಳಿಸುವ ದಿಶೆಯಲ್ಲಿ ವಿಚಾರ ವಿನಿಮಯ ನಡೆಸಿ ಕಾರ್ಯೋನ್ಮುಖರಾಗುವುದೆಂದು ನಿರ್ಧರಿಸಲಾಯಿತು. ಇದು ಕೇವಲ ಏಕಮುಖ ಸಂಘಟನೆಯಾಗದೆ ಮಹಿಳಾ, ವಿದ್ಯಾರ್ಥಿ ಘಟಕಗಳನ್ನು ಪ್ರಾರಂಭಿಸುವುದರ ಮೂಲಕ ಎಲ್ಲಾ ವರ್ಗದ ಜನಹಿತ ಕಾರ್ಯ ನಿರ್ವಹಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಪ್ರಸ್ತಾಪಿಸಲಾಯಿತು.
ಜಯಕರ್ನಾಟಕ ಜಿಲ್ಲಾ ಸದಸ್ಯರಲ್ಲದೆ ಮಹಿಳೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದ ಸಭೆಯನ್ನು ಉದ್ದೇಶಿಸಿ ಹೋರಾಟ ಸಮಿತಿಯ ಅಧ್ಯಕ್ಷರಾದ ಕರುಣಾಕರ ಎಂ. ಪೂಜಾರಿ, ಕಾರ್ಯಾಧ್ಯಕ್ಷರಾದ ಶರತ್ ಶೆಟ್ಟಿ ಕುಂದಾಪುರ, ಪ್ರಧಾನ ಸಂಚಾಲಕರಾದ ರತ್ನಾಕರ ಮೊಗವೀರ ಮಾತನಾಡಿದರು. ಗೌರವ ಸಲಹೆಗಾರರಾದ ಸುಧಾಕರ್ ರಾವ್ ಬಾರ್ಕೂರು, ಮಾಧ್ಯಮ ವಕ್ತಾರ ಶ್ರೀನಿವಾಸ ಶೆಟ್ಟಿ ತೋನ್ಸೆ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ನಿತ್ಯಾನಂದ ಅಮೀನ್ ಸ್ವಾಗತಿಸಿ ವಂದಿಸಿದರು.




