ಉಡುಪಿ : ಉದ್ಯೋಗದ ನಿಮಿತ್ತ ಪರಿಚಯವಾಗಿದ್ದ ವ್ಯಕ್ತಿಯಿಂದ 10 ಲಕ್ಷ ರೂಪಾಯಿ ಸಾಲ ಪಡೆದು ವಾಪಸ್ ನೀಡದೇ ವಂಚನೆ ಎಸಗಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಲಪಾಡಿ ಗ್ರಾಮದ ಸಜ್ಜನ್ ಶೆಟ್ಟಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಸಜ್ಜನ್ ಶೆಟ್ಟಿಗೆ ಸಿದ್ದಾರ್ಥ ಶೆಟ್ಟಿ ಅವರ ಪರಿಚಯವಾಗಿದ್ದು, ಬಳಿಕ ಅವರ ತಂದೆ ಅಮರನಾಥ್ ಶೆಟ್ಟಿ, ತಾಯಿ ಚಂದ್ರಕಲಾ ಎ. ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಹಾಗೂ ಸದಾಶಿವ ಶೆಟ್ಟಿ ಅವರ ಪರಿಚಯವೂ ಆಗಿತ್ತು. ಸಿದ್ದಾರ್ಥ ಶೆಟ್ಟಿಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ, ಆರೋಪಿತರೆಲ್ಲರೂ ಸೇರಿ 10,00,000 ರೂ. ಸಾಲವಾಗಿ ನೀಡುವಂತೆ ಮನವಿ ಮಾಡಿದ್ದರು. ಐದು ತಿಂಗಳೊಳಗೆ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರಿಂದ ದೂರುದಾರರು ಹಣ ನೀಡಿದ್ದರು ಎನ್ನಲಾಗಿದೆ. ನಂತರ ಹಣವನ್ನು ವಾಪಸ್ ಕೇಳಿದಾಗ ಆರೋಪಿತರು ವಿವಿಧ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ಆರೋಪಿತರು ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆಯ ಚೆಕ್ ನೀಡಿದ್ದು, ಅದನ್ನು ಬ್ಯಾಂಕಿಗೆ ಜಮಾ ಮಾಡಿದಾಗ ಖಾತೆಯಲ್ಲಿ ಸಾಕಷ್ಟು ಹಣವಿರಲಿಲ್ಲ. ಈ ವಿಚಾರವನ್ನು ಪ್ರಶ್ನಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




