ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೊಬ್ಬ ಗಾಯಗೊಂಡ ಘಟನೆ ಲಾಯಿಲ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮಂಗಳೂರಿನ ಕಾಲೇಜೊಂದರ ನಾಲ್ಕು ಮಂದಿ ವಿದ್ಯಾರ್ಥಿಗಳು ಕೊಟ್ಟಿಗೆಹಾರ ಸಮೀಪದ ದೇವರ ಮನೆಗೆ ಹೋಗಿದ್ದು ಅಲ್ಲಿಂದ ಸಂಜೆ ಹಿಂತಿರುಗುತಿದ್ದ ವೇಳೆ ಲಾಯಿಲ ಬಳಿ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕಿನ ಹಿಂಬದಿ ಸವಾರ ಪ್ಯಾರಾ ಮೆಡಿಕಲ್ ವಿದ್ಯಾರ್ಥಿ ಮಂಗಳೂರು ನಿವಾಸಿ ಧೀರಜ್ (23) ಸ್ಥಳದಲ್ಲೇ ಸಾವನ್ನಪ್ಪಿದ್ದು, ಸವಾರ ಗಾಯಗೊಂಡಿದ್ದಾರೆ ಎಂದು ತಿಳಿಯಲಾಗಿದೆ.
ಮೇಲ್ನೋಟಕ್ಕೆ ಹೆದ್ದಾರಿಯಲ್ಲಿದ್ದ ಗುಂಡಿಗೆ ಬಿದ್ದು ಬೈಕ್ ಪಲ್ಟಿಯಾದ ವೇಳೆ ನೀರಿನ ಟ್ಯಾಂಕರೊಂದು ಈ ವೇಳೆ ಸಂಚರಿಸುತ್ತಿದ್ದು ಇದರ ಟಯರ್ ಧೀರಜ್ ಮೇಲೆ ಹಾದು ಹೋಗಿರುವ ಬಗ್ಗೆ ಸಹ ವಿದ್ಯಾರ್ಥಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಅದಲ್ಲದೇ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯೂ ಈ ಅವಘಡಕ್ಕೆ ಕಾರಣ ಸರಿಯಾದ ಸೂಚನಾ ಫಲಕಗಳನ್ನು ಅಳವಡಿಸದೇ ಅಲ್ಲಲ್ಲಿ ಗುಂಡಿ ಇರುವುದು ಕೂಡ ಇಂತಹ ಘಟನೆಗಳಿಗೆ ಕಾರಣ ಎಂಬ ಬಗ್ಗೆಯೂ ಸಾರ್ವಜನಿಕರು ಆರೋಪ ಮಾಡುತಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಪಘಾತ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.




