ಉಡುಪಿ: ಸರ್ಕಾರ ನಡೆಸುವಾಗ ಅಧಿಕಾರ ತನ್ನ ಕೈಯಲ್ಲಿದ್ದರೂ ಸಮಾಜದ ಸರ್ವ ನಾಗರಿಕರ ವಿಶ್ವಾಸವನ್ನು ಗಳಿಸಿಕೊಳ್ಳುವುದು ಅತಿ ಮುಖ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
ಯಾವುದೇ ಒಂದು ಸರ್ಕಾರ ನಡೆಸುವಾಗ ಪ್ರಜೆಗಳ ವಿಶ್ವಾಸ ಗಳಿಸುವುದು ಮುಖ್ಯ. ಸಮಾಜದ ಯಾವುದಾದರೊಂದು ವರ್ಗಕ್ಕೆ ಅಭದ್ರತೆಯ ಭಯ ಕಾಡಿದರೆ ಅದರಿಂದ ಸಮಾಜದಲ್ಲಿ ಅನೇಕ ವಿವಾದಗಳು ಮತ್ತು ಅಶಾಂತಿ ತಲೆದೋರುವ ಸಂಭವವಿರುತ್ತದೆ. ಹಾಗಾಗಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ರಾಜಧರ್ಮ ಎಂದು ಶ್ರೀಗಳು ಹೇಳಿದರು.
ನೂತನ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲೇ ಸರ್ವ ಧರ್ಮದ ಧಾರ್ಮಿಕ ಮುಖಂಡರನ್ನು ಮುಂಚೂಣಿಯಲ್ಲಿ ಇರಿಸಿಕೊಂಡಿದ್ದು, ತಾವು ಸರ್ವ ಧರ್ಮವನ್ನೂ ಸಮಭಾವದಿಂದ ಕಾಣುತ್ತೇವೆ ಎಂಬ ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ. ಸರ್ಕಾರದ ಈ ಸಕಾರಾತ್ಮಕ ನಡಿಗೆಯನ್ನು ಬೆಂಬಲಿಸುವುದು ನಮ್ಮ ಕರ್ತವ್ಯ. ಮುಖ್ಯಮಂತ್ರಿಗಳಿಗೆ ಸಮಾಜವನ್ನು ಸುಸ್ಥಿತಿಯಲ್ಲಿ ಮುನ್ನಡೆಸುವ ಶಕ್ತಿಯನ್ನು ಶ್ರೀಕೃಷ್ಣ ಹಾಗೂ ಶ್ರೀರಾಮದೇವರು ಕರುಣಿಸಲಿ ಎಂದು ಶ್ರೀಗಳು ಪ್ರಾರ್ಥಿಸಿದ್ದಾರೆ.




