ಬೆಳ್ತಂಗಡಿ : ವಿಶೇಷ ತನಿಖಾ ತಂಡದ (ಎಸ್ಐಟಿ) ನೈತಿಕ ಸ್ಥೆರ್ಯ ಕುಗ್ಗಿಸಲು ಹುನ್ನಾರ ನಡೆಯುತ್ತಿದ್ದು, ದುಷ್ಟ ಶಕ್ತಿಗಳ ಹುನ್ನಾರವನ್ನು ಮೆಟ್ಟಿ ನಿಲ್ಲಲು ಲಕ್ಷಾಂತರ ಮಂದಿಯನ್ನು ಸೇರಿಸಿ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಸೌಜನ್ಯ ಪರ ನ್ಯಾಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎಚ್ಚರಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೌಜನ್ಯ ಹೋರಾಟ ಹಾಗೂ ಧರ್ಮಸ್ಥಳ ಶವ ಹೂಳಲಾಗಿದೆ ಎನ್ನಲಾದ ಪ್ರಕರಣದಲ್ಲಿ ಎಸ್ಐಟಿ ಪಾರದರ್ಶಕ ತನಿಖೆ ನಡೆಸುತ್ತಿದೆ. ಆದರೂ ಎಸ್ಐಟಿ ತಂಡವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಎಸ್ಐಟಿ ಒಳ್ಳೆಯ ತನಿಖೆ ಮಾಡುತ್ತಿದೆ.
ಎಸ್ಐಟಿ ಗೆ ಶಕ್ತಿ ತುಂಬಲು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ. ಪ್ರತಿಭಟನೆಯ ಸಮಯ, ದಿನ ನಿಗದಿ ಮಾಡುತ್ತೇವೆ ಎಂದರು.
ಮಹಾತ್ಮ ಗಾಂಧಿ ಬೋಧಿಸಿದ ಶಾಂತಿ ಮಂತ್ರದ ಪ್ರೇರಣೆಯಂತೆ ಬೆಳ್ತಂಗಡಿ ತಾಲೂಕಿನಲ್ಲಿ ಲಕ್ಷಾಂತರ ಜನ ಸೇರಿ ಮೌನ ಪ್ರತಿಭಟನೆ ಮಾಡಲಿದ್ದೇವೆ.
ಸೆ.16ರಂದು ಸಂಕ್ರಮಣ ದಿನದಂದು ಎಲ್ಲಾ ಮಠ, ಮಂದಿರ, ದೈವಸ್ಥಾನಗಳಲ್ಲಿ ಪ್ರಾರ್ಥಿಸಿ, ಎಸ್ಐಟಿ ತಂಡಕ್ಕೆ ಸತ್ಯ ಹೊರತರಲು ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡುತ್ತೆವೆ ಎಂದರು.
