ಉಡುಪಿ : ಜೀವನದ ಸವಾಲುಗಳನ್ನು ಎದುರಿಸುವುದರೊಂದಿಗೆ ನಿರಂತರ ಪ್ರಯತ್ನ ಮತ್ತು ಪರಿಶ್ರಮ ಪಟ್ಟರೆ ಯಶಸ್ಸು ಸುಗಮವಾಗುತ್ತದೆ ಎಂದು ಮುಂಬೈಯಲ್ಲಿ ಕಸ್ಟಮ್ಸ್ ವಿಭಾಗದ ಸಹಾಯಕ ಆಯುಕ್ತೆ ಐ.ಆರ್.ಎಸ್. ಅಧಿಕಾರಿ ಮಿಶಲ್ ಕ್ವೀನಿ ಡಿಕೋಸ್ತಾ ಹೇಳಿದ್ದಾರೆ.
ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗ, ಶಿಕ್ಷಣ ಮಾತ್ತು ಸಾಮಾಜಿಕ ಸಂಪರ್ಕ ಮಾಧ್ಯಮ ಆಯೋಗದ ಜಂಟಿ ಆಶ್ರಯದಲ್ಲಿ ರವಿವಾರ ಸಂತೆಕಟ್ಟೆ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣ ರಾಗಬೇಕು ಈ ಮೂಲಕ ಸರಕಾರಿ ಸೇವೆ ಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂಬ ಹಂಬಲವಿದ್ದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಠಿಣ ಪರಿಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ. ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಯುವ ಜನರು ಮೊದಲ ಸ್ಥಾನದಲ್ಲಿದ್ದರೂ ಕೂಡ ಸರಕಾರಿ ಸೇವೆಗಳತ್ತ ಆಸಕ್ತಿ ತೋರುತ್ತಿಲ್ಲ. ಸರಕಾರಿ ಸೇವೆಗೆ ಆಯ್ಕೆಯಾ ಗುವುದು ಕಷ್ಟದ ಕೆಲಸ ಎಂಬ ತಪ್ಪು ಭಾವನೆ ಕೂಡ ಇದ್ದು ಸೂಕ್ತ ಜಾಗೃತಿಯ ಮೂಲಕ ಯುವಜನತೆಗೆ ಪ್ರೋತ್ಸಾಹ ನೀಡಬೇಕಾದ ಅನಿವಾರ್ಯತೆ ಇದೆ ಎಂದರು.
2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 372ನೇ ರ್ಯಾಂಕ್ ಪಡೆದ ಉಡುಪಿಯ ಶ್ರೇಯಾನ್ಸ್ ಗೋಮ್ಸ್ ತಾವು ಪರೀಕ್ಷೆಗೆ ನಡೆಸಿದ ತಯಾರಿ, ಎದುರಿಸಿದ ಸವಾಲುಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ಸಮುದಾಯದ ಮಕ್ಕಳು ಸರಕಾರಿ ಸೇವೆಗೆ ಹೋಗುವ ಬಗ್ಗೆ ಸದಾ ಕನಸುಗಳನ್ನು ಕಾಣಬೇಕು. ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಧರ್ಮಪ್ರಾಂತ್ಯದ ವತಿಯಿಂದ ಸದಾ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ಧರ್ಮಪ್ರಾಂತ್ಯದ ಕುಲಪತಿ ವಂ.ಸ್ಟೀವನ್ ಡಿಸೋಜ, ಧರ್ಮಗುರು ಗಳಾದ ವಂ.ವಿಲ್ಸನ್ ಡಿಸೋಜ, ವಂ.ಅಶ್ವಿನ್ ಆರಾನ್ಹಾ ಉಪಸ್ಥಿತರಿದ್ದರು. ಧರ್ಮಪ್ರಾಂತ್ಯದ ಶಿಕ್ಷಣ ಆಯೋಗದ ನಿರ್ದೇಶಕ ವಂ.ವಿನ್ಸೆಂಟ್ ಕ್ರಾಸ್ತಾ ಸ್ವಾಗತಿಸಿ ದರು. ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ ಅತಿಥಿಗಳನ್ನು ಪರಿಚಯಿಸಿದರು. ಯುವ ಆಯೋಗದ ನಿರ್ದೇಶಕ ವಂ.ಸ್ಟೀವನ್ ಫೆರ್ನಾಂಡಿಸ್ ಪ್ರಾರ್ಥನಾ ವಿಧಿ ನೆರವೇರಿಸಿದರು. ಲೆಸ್ಲಿ ಆರೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



