ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ʻಬುರುಡೆʼ ಚಿನ್ನಯ್ಯನನ್ನ ಮತ್ತೆ 4 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಸೆ.6ರಂದು ಚಿನ್ನಯ್ಯನನ್ನ ಕೋರ್ಟ್ಗೆ ಹಾಜರುಪಡಿಸುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.
12 ದಿನಗಳ ಎಸ್ಐಟಿ ಕಸ್ಟಡಿ ಇಂದು ಅಂತ್ಯಗೊಂಡಿದ್ದ ಹಿನ್ನೆಲೆ ಚಿನ್ನಯ್ಯನನ್ನ ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಬೆಳ್ತಂಗಡಿ ತಾಲೂಕು ನ್ಯಾಯಾಲಯದ ಹೆಚ್ಚುವರಿ ವ್ಯಾವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಾಧೀಶರಾದ ವಿಜಯಾನಂದ.ಟಿ ಅವರ ಎದುರು ಹಾಜರುಪಡಿಸಲಾಗಿತ್ತು. ತನಿಖಾಧಿಕಾರಿ ಎಸ್ಪಿ ಜಿತೇಂದ್ರ ಕುಮಾರ್ ದಯಾಮ, ಸರ್ಕಾರಿ ಅಭಿಯೋಜಕರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಇಬ್ಬರು ವಕೀಲರು ಈ ವೇಳೆ ಕೋರ್ಟ್ನಲ್ಲಿ ಹಾಜರಿದ್ದರು. ಬಳಿಕ ಕೋರ್ಟ್ನ ಬಾಗಿಲುಗಳನ್ನು ಮುಚ್ಚಿ ವಿಚಾರಣೆ ನಡೆಸಲಾಯಿತು.
ವಿಚಾರಣೆಗೂ ಮುನ್ನ ಸರ್ಕಾರಿ ಅಭಿಯೋಜಕರು ಕೋರ್ಟ್ಗೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಕೆ ಮಾಡಿದರು. ಅಲ್ಲದೇ ಸಾಕ್ಷಿ ಸಂಗ್ರಹಣೆ, ಬಾಕಿ ವಿಚಾರಣೆ ಇತ್ಯಾದಿ ವಿವರಗಳನ್ನೂ ಸಲ್ಲಿಸಿದರು. ಇದೇ ವೇಳೆ ಎಸ್ಐಟಿಯಿಂದಲೂ ತನಿಖಾ ಪ್ರಗತಿ ವರದಿಯನ್ನ ಕೋರ್ಟ್ಗೆ ಸಲ್ಲಿಸಲಾಯಿತು.
ಈ ವೇಳೆ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಚಿನ್ನಯ ಪರ ವಾದ ಮಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು ದೆಹಲಿ, ತಮಿಳುನಾಡಿನಲ್ಲಿ ಮಹಜರು ನಡೆಸಬೇಕಿರುವುದರಿಂದ ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ವಾದ ಪ್ರತಿವಾದಗಳನ್ನು ಆಲಿಸಿದ ಬಳಿಕ ಕೋರ್ಟ್ ಚಿನ್ನಯ್ಯನನ್ನ ಮತ್ತೆ 4 ದಿನ ಕಸ್ಟಡಿಗೆ ನೀಡಿ ಆದೇಶಿಸಿತು. ಸೆ.6ರಂದು ಮತ್ತೆ ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಿದೆ.