ವಾರಾಣಸಿ: ಫಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಸಾಕಷ್ಟು ಭಧ್ರತೆ ಹೆಚ್ಚಿಸಲಾಗಿದೆ.
ಕೇಂದ್ರ ಸರ್ಕಾರ ಸಹ ಪಾಕ್ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಆದರೆ ಇದರ ನಡುವೆ ಇದೀಗ ವಾರಾಣಸಿ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಬೆಂಗಳೂರಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿದ್ದ ಕೆನಡಾದ ಪ್ರಯಾಣಿಕನೊಬ್ಬ ತನ್ನ ಬಳಿ ಬಾಂಬ್ ಇದೆ ಎಂದು ಹೇಳಿ ಪ್ರಯಾಣಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಪೊಲೀಸರು ಕೆನಡಾದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಾಂಬ್ ಬೆದರಿಕೆ ಹಾಕಿದ ಕೆನಡಾದ ವಿದೇಶಿ ಪ್ರಜೆಯನ್ನು ತಕ್ಷಣವೇ ಪೊಲೀಸರು ಬಂಧಿಸಿದರು. ಅಲ್ಲದೇ ಭದ್ರತಾ ಸಂಸ್ಥೆಗಳು ಆತನನ್ನು ವಿಚಾರಿಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಯದ ನಂತರ, ಇಂಡಿಗೋ ಸಿಬ್ಬಂದಿ ತಕ್ಷಣವೇ ವಾಯು ಸಂಚಾರ ನಿಯಂತ್ರಣಕ್ಕೆ (ATC) ಮಾಹಿತಿ ನೀಡಿದರು. ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಬಳಿಕ ಸಂಪೂರ್ಣ ತಪಾಸಣೆ ನಡೆಸಲಾಯಿತು, ಆದರೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಪುನೀತ್ ಗುಪ್ತಾ ದೃಢಪಡಿಸಿದ್ದಾರೆ.
ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿ ಪ್ರಮಾಣಿತ ಭದ್ರತಾ ಶಿಷ್ಟಾಚಾರಗಳ ಪ್ರಕಾರ ಪರಿಶೀಲಿಸಲಾಯಿತು ಎಂದು ಗುಪ್ತಾ ಹೇಳಿದರು. ಭದ್ರತಾ ಸಂಸ್ಥೆಗಳಿಂದ ಅನುಮತಿ ಪಡೆದ ನಂತರ, ವಿಮಾನವು ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಹೊರಟಿತು ಎಂದು ವರದಿಯಾಗಿದೆ.