Home Latest ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ : ವಿತರಕ ಏಜೆನ್ಸಿಗಳ ವಿರುದ್ಧ ಜಿಲ್ಲಾ ವೈನ್ ಮರ್ಚೆಂಟ್ಸ್...

ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ : ವಿತರಕ ಏಜೆನ್ಸಿಗಳ ವಿರುದ್ಧ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಆಕ್ರೋಶ..!

ಉಡುಪಿ: ಕಳೆದ ಎರಡು ತಿಂಗಳಿನಿಂದ ಆಹಾರ ತಯಾರಿಸುವ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಅಡುಗೆ ಅನಿಲ ಸರಬರಾಜು ಆಗುತ್ತಿಲ್ಲ. ಕಾಳಸಂತೆಯಲ್ಲಿ ಗ್ಯಾಸ್ ಸಿಗುತ್ತದೆ ಮತ್ತು ಕೇಟರಿಂಗ್ ಅವರಿಗೂ ಗ್ಯಾಸ್ ಪೂರೈಕೆ ಆಗುತ್ತಿದೆ. ಆದರೆ ಸರಕಾರಕ್ಕೆ ಜಿಎಸ್‌ಟಿ ಮತ್ತು ಅಬಕಾರಿ ತೆರಿಗೆ ಪಾವತಿಸುವ ಬಾರ್‌ಗಳಿಗೆ ಗ್ಯಾಸ್ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಗ್ಯಾಸ್ ವಿತರಕ ಏಜೆನ್ಸಿಗಳ ಗ್ಯಾಸ್ ಸರಬರಾಜು ಬಗ್ಗೆ ಅಡಿಟ್ ಆಗಬೇಕು ಎಂದು ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಬಿ.ಗೋವಿಂದ ರಾಜ್ ಹೆಗ್ಡೆ ಆಗ್ರಹಿಸಿದ್ದಾರೆ.

 

ಉಡುಪಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ವತಿಯಿಂದ ಬಾರ್‌ಗಳಿಗೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಯವನ್ನು ಖಂಡಿಸಿ ಉಡುಪಿಯ ಶಾರದಾ ಹೋಟೆಲ್‌ನಲ್ಲಿ ಕರೆಯಲಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

 

ಮಧ್ಯಪ್ರಾಚ್ಯದ ಯುದ್ಧವನ್ನು ನೆಪವಾಗಿಟ್ಟುಕೊಂಡು ಕಳೆದ 2 ತಿಂಗಳಿನಿಂದ ಗ್ಯಾಸ್ ಪೂರೈಕೆಯಾಗಿಲ್ಲ. ಜಿಎಸ್‌ಟಿ ಪಾವತಿಸುವ ಬಗ್ಗೆ ಗ್ಯಾಸ್ ಸಿಗದೇ ಉದ್ಯಮ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಸಾರ್ವಜನಿಕವಾಗಿ ನಡೆಯುವ ಯಾವ ಕಾರ್ಯಕ್ರಮಕ್ಕೂ ಅಡ್ಡಿಯಾಗದ ಗ್ಯಾಸ್ ಸಮಸ್ಯೆ ಬಾರ್, ಹೋಟೆಲ್‌ಗಳಿಗೆ ಮಾತ್ರವೇ ಯಾಕೆ ಅನ್ವಯವಾಗುತ್ತಿದೆ ಎಂದು ಅವರು ದೂರಿದರು.ತಿಂಗಳಿಗೆ 30-40 ಸಾವಿರ ಜಿಎಸ್‌ಟಿ ಪಾವತಿಸುತ್ತೇವೆ. ಬಾರ್ ಆ್ಯಂಡ್ ರೆಸ್ಟೋರೆಂಟ್, ವೆಜ್ ರೆಸ್ಟೋರೆಂಟ್‌ಗಳಿಗೆ ಶೀಘ್ರವೇ ಆದ್ಯತೆ ಮೇರೆಗೆ ಗ್ಯಾಸ್‌ಯನ್ನು ಪೂರೈಸಬೇಕು.

 

ಜಿಲ್ಲಾಧಿಕಾರಿಗಳು ಏಜೆನ್ಸಿಗಳ ಗ್ಯಾಸ್ ಸರಬರಾಜು ಮತ್ತು ವಿತರಣೆಯ ಬಗ್ಗೆ ಅಡಿಟ್ ಮಾಡಿ ವಾಸ್ತವಾಂಶವನ್ನು ಸಮಾಜದ ಮುಂದಿಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗುವುದು. ನಮ್ಮ ಮನವಿಗೆ ಸ್ಪಂದನೆ ಸಿಗದಿದ್ದರೆ ಮುಂದೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

 

ಸಭೆಯಲ್ಲಿ ಉಡುಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಕುಂದಾಪುರ ತಾಲೂಕು ಅಧ್ಯಕ್ಷ ರೋಹಿತ್ ಕುಮಾರ್ ಶೆಟ್ಟಿ, ಸಜ್ಜನ್ ಹೆಗ್ಡೆ, ಹಂಸರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.