ಉಡುಪಿ: ಛಾಯಾಚಿತ್ರವೆಂದರೆ ಕೇವಲ ದೃಶ್ಯ ದಾಖಲೆಯಲ್ಲ, ಅದು ಸಂಸ್ಕೃತಿಯ ಸ್ಪಂದನ, ಮಣ್ಣಿನ ಪರಿಮಳ, ಜೀವನದ ತೀವ್ರ ಕ್ಷಣಗಳನ್ನು ಜಗತ್ತಿನ ಮುಂದೆ ಅನಾವರಣಗೊಳಿಸುವ ಶಕ್ತಿಯುತ ಭಾಷೆ. ಈ ಮಾತಿಗೆ ಜೀವಂತ ಸಾಕ್ಷಿಯಾಗಿ ಉಡುಪಿಯ ಹಿರಿಯ ಫೋಟೋ ಪತ್ರಕರ್ತ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರು ಅಮೆರಿಕದ ಪ್ರತಿಷ್ಠಿತ Photographic Society of America ಆಯೋಜಿಸಿದ ೨೦೨೫–೨೦೨೬ನೇ ಸಾಲಿನ ಇಂಟರ್ಕ್ಲಬ್ ಛಾಯಾಚಿತ್ರ ಸ್ಪರ್ಧೆಯ ಮೂರನೇ ಸುತ್ತಿನಲ್ಲಿ ಎರಡು ವಿಭಾಗಗಳಲ್ಲಿ ಅಂತರರಾಷ್ಟ್ರೀಯ ಗೌರವ ಪಡೆದು ಮತ್ತೊಮ್ಮೆ ಕನ್ನಡಿಗರ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಬೆಳಗಿಸಿದ್ದಾರೆ.
ಸ್ಪರ್ಧೆಯ ವರ್ಣಚಿತ್ರ ವಿಭಾಗದಲ್ಲಿ ಅವರ ‘ಗೋಲ್ಡನ್ ಚಾರ್ಜ್’ ಚಿತ್ರಕ್ಕೆ ಮೆರಿಟ್ ಪ್ರಶಸ್ತಿ ಲಭಿಸಿದ್ದರೆ, ಪ್ರವಾಸ ಛಾಯಾಚಿತ್ರ ವಿಭಾಗದಲ್ಲಿ ‘ಬೆಂಕಿಯೇ ಪ್ರಾರ್ಥನೆಯಾದಾಗ’ ಎಂಬ ಚಿತ್ರಕ್ಕೆ ಗೌರವಾನ್ವಿತ ವಿಶೇಷ ಉಲ್ಲೇಖ ದೊರೆತಿದೆ.

ಆಸ್ಟ್ರೋ ಮೋಹನ್ ಅವರ ಚಿತ್ರಗಳು ಕೇವಲ ಕಲಾತ್ಮಕತೆಯ ಪ್ರತೀಕಗಳಲ್ಲ; ಅವು ಭಾರತೀಯ ಸಂಸ್ಕೃತಿಯ ಬೇರುಗಳನ್ನು, ಜನಜೀವನದ ನೈಜತೆಯನ್ನು ಹಾಗೂ ಭಾವನಾತ್ಮಕ ಕ್ಷಣಗಳ ಆಳವನ್ನು ವಿಶ್ವದ ವೇದಿಕೆಯಲ್ಲಿ ಪ್ರತಿಧ್ವನಿಸುವಂತೆ ಮಾಡುವ ದೃಶ್ಯಕಾವ್ಯಗಳಾಗಿವೆ. ಮಣ್ಣಿನ ನಂಟು ಕಳೆದುಕೊಳ್ಳದೆ, ಸ್ಥಳೀಯತೆಯನ್ನು ವಿಶ್ವಮಾನ್ಯತೆಗೆ ಕೊಂಡೊಯ್ಯುವ ಅವರ ಛಾಯಾಗ್ರಹಣ ದೃಷ್ಟಿಕೋನವೇ ಈ ಸಾಧನೆಯ ಹಿಂದೆ ಇರುವ ಶಕ್ತಿಯಾಗಿದೆ.
ಈ ಸಾಧನೆ ಕುರಿತು ಪ್ರತಿಕ್ರಿಯಿಸಿದ ಆಸ್ಟ್ರೋ ಮೋಹನ್, “ಪ್ರತಿ ಫ್ರೇಮ್ ಒಂದೊಂದು ಕಥೆ ಹೇಳುತ್ತದೆ “ ಸ್ಥಳೀಯ ಸಂಸ್ಕೃತಿ ಇದರ ಮೂಲ ಹಂದರವಾಗಿದೆ” ಎಂದು ತಿಳಿಸಿದ್ದಾರೆ.




