Home Latest ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಜಿಲ್ಲೆಯ ಅಗ್ನಿಶಾಮಕ ದಳದ ಬಲವರ್ಧನೆ...

ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಜಿಲ್ಲೆಯ ಅಗ್ನಿಶಾಮಕ ದಳದ ಬಲವರ್ಧನೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು ಜಿಲ್ಲೆಯ ಅಗ್ನಿಶಾಮಕ ದಳದ ಬಲವರ್ಧನೆ ಮಾಡಿ ಅಗ್ನಿಶಾಮಕ ದಳಕ್ಕೆ ಹೆಚ್ಚುವರಿ ವಾಹನ ಹಾಗೂ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವಂತೆ ಆಗ್ರಹಿಸಿ ಬಿಜೆಪಿ ಯುವಮೋರ್ಚಾ ವತಿಯಿಂದ ಮುಖ್ಯಮಂತ್ರಿಗಳಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

 

ಉಡುಪಿ ಜಿಲ್ಲೆಯ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಯ ಧೋರಣೆಯ ಕುರಿತು ಜಿಲ್ಲೆಯ ಅಗ್ನಿಶಾಮಕ ದಳದ ತುರ್ತು ಸೇವಾ ವೈಫಲ್ಯವೇ ಸಾಕ್ಷಿ. ಮೊನ್ನೆ ಉಡುಪಿ ನಗರದ ಹೃದಯ ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಕೇವಲ 2 ಕಿಲೋ ಮೀಟರ್ ದೂರದ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಲುಪಲು 45 ನಿಮಿಷ ತೆಗೆದುಕೊಳ್ಳುವ ಮೂಲಕ ಅಗ್ನಿಶಾಮಕ ದಳದ ತುರ್ತು ಕಾರ್ಯಚರಣೆಯ ಸಾಮರ್ಥ್ಯದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

 

ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಉಡುಪಿ ನಗರದ ಅಗ್ನಿಶಾಮಕ ದಳಕ್ಕೆ ಹೆಚ್ಚುವರಿ ವಾಹನ ಹಾಗೂ ಖಾಲಿ ಹುದ್ದೆಗಳ ಭರ್ತಿ ಮಾಡುವಂತೆ ಮನವಿ ಮಾಡಿದ್ದರೂ ಈವರೆಗೂ ಪೂರಕವಾಗಿ ಸ್ಪಂದಿಸಿಲ್ಲ. ಉಡುಪಿ ಜಿಲ್ಲೆಯಾಗಿ 28 ವರ್ಷಗಳು ಕಳೆದರೂ ತುರ್ತು ಕಾರ್ಯಚರಣೆಯ ಸಂದರ್ಭದಲ್ಲಿ ನೆರೆಯ ಜಿಲ್ಲೆಯನ್ನು ಅವಲಂಬಿಸುವ ಸನ್ನಿವೇಶ ನಿರ್ಮಾಣವಾಗಿರುವುದು ದುರದೃಷ್ಟಕರ.

 

ಮಣಿಪಾಲ ಹಾಗೂ ಬ್ರಹ್ಮಾವರ ಭಾಗಕ್ಕೆ ಅಗ್ನಿಶಾಮಕ ದಳದ ಬೇಡಿಕೆಗೆ ಇದೀಗ ಮಂಜೂರಾತಿ ನೀಡಿದ್ದರೂ, ಬ್ರಹ್ಮಾವರ ಅಗ್ನಿಶಾಮಕದಳ ಘಟಕಕ್ಕೆ ಇನ್ನು ಅನುದಾನ ಮಂಜೂರಾತಿ ಆಗಿಲ್ಲ. ಅಗ್ನಿಶಾಮಕ ದಳದಲ್ಲಿ 15 ವರ್ಷ ಹಳೆಯದಾದ ವಾಹನಗಳು ಸೇವೆಗೆ ಲಭ್ಯವಾಗದ ಕಾರಣ ಹೊಸ ವಾಹನಗಳ ಮಂಜೂರಾತಿಗೂ ರಾಜ್ಯ ಸರಕಾರ ಮೀನ ಮೇಷ ಎಣಿಸುತ್ತಿರುವುದು ಆತಂಕಕರವಾಗಿದೆ.

 

ಕೇರಳದ ವಯನಾಡಿನಲ್ಲಿ ದುರಂತ ಸಂಭವಿಸಿದಾಗ ರಾಜ್ಯದ ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಮುತುವರ್ಜಿ ವಹಿಸಿ ನೀಡಿದ ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ತಳೆದಿರುವುದು ಆಕ್ಷಮ್ಯ. ಮೊನ್ನೆ ಉಡುಪಿಯಲ್ಲಿ ಅಗ್ನಿ ಅವಘಡದಿಂದ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸಿದ ಅಂಗಡಿ ಮಾಲೀಕರಿಗೆ ಸರಕಾರ ತಕ್ಷಣ ಗರಿಷ್ಠ ಪರಿಹಾರ ನೀಡಬೇಕು.

 

ಅಲ್ಲದೇ, ಮೀನುಗಾರಿಕೆ, ಆರೋಗ್ಯ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕಾ ಕ್ಷೇತ್ರದಲ್ಲಿ ದಿನೇ ದಿನೇ ಬೆಳೆಯುತ್ತಿರುವ ಉಡುಪಿ ಜಿಲ್ಲೆಗೆ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಅಗ್ನಿಶಾಮಕ ದಳ ಅತ್ಯಂತ ಅಗತ್ಯವಾಗಿದ್ದು, ಸರ್ಕಾರ ಇನ್ನಾದರೂ ಉಡುಪಿ ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಕೈಬಿಟ್ಟು, ಕೇವಲ ಗ್ಯಾರಂಟಿ ಯೋಜನೆಗಳನ್ನೇ ನೆಚ್ಚಿಕೊಳ್ಳದೆ ಅಗ್ನಿಶಾಮಕ ದಳದಂತಹ ಅತ್ಯಗತ್ಯ ತುರ್ತು ಸೇವೆಗಳ ಬಗ್ಗೆ ವಿಶೇಷ ಆದ್ಯತೆ ನೀಡಿ ಸಾರ್ವಜನಿಕರ ಜೀವ ಹಾಗೂ ಆಸ್ತಿ ಪಾಸ್ತಿ ರಕ್ಷಣೆಗೆ ವಿಶೇಷ ಆದ್ಯತೆನೀಡಬೇಕು. ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಜನತೆಯ ತಾಳ್ಮೆ ಪರೀಕ್ಷೆ ಮಾಡಲು ಮುಂದಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡುವುದಾಗಿ ಮನವಿಯಲ್ಲಿ ಹೇಳಿದ್ದಾರೆ.

 

ಈ ಸಂದರ್ಭದಲ್ಲಿ ಬಿಜೆಪಿ ಯುವಮೋರ್ಚಾ ಪದಾಧಿಕಾರಿಗಳಾದ ಪ್ರದೀಪ್ ಕುಂದರ್, ಸುಶಾಂತ್ ಪೂಜಾರಿ, ಮಿಥುನ್ ಅಮೀನ್, ಸಚಿನ್ ಪೂಜಾರಿ, ಗಣೇಶ್ ಸೂರಲು, ಭರತ್ ಪೂಜಾರಿ, ಅವಿನಾಶ್,ನಿತಿನ್ ಪೈ , ನಿಖಿಲ್ ಮಡಿವಾಳ್ , ಭೂಷಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.