ಬೈಂದೂರು: ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕಳಿಹಿತ್ಲು ಪ್ರದೇಶದಲ್ಲಿ ನಡೆದಿದೆ.
ಪಿರ್ಯಾದಿದಾರರಾದ ತಬ್ಕೆ ಸಮ್ರಾನ್ (28), ಶಿರೂರು ನಿವಾಸಿ, ಅವರು ಏಪ್ರಿಲ್ 28ರಂದು ರಾತ್ರಿ 10:45ರ ಸುಮಾರಿಗೆ ರೆಶನ್ ಸಾಮಾನು ಪಡೆದು ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಆರೋಪಿಯಾದ ಮುಲ್ಲಾ ಜಾಸಿಂ, “ನೀನು ನನ್ನನ್ನು ಯಾಕೆ ಗುರಾಯಿಸಿ ನೋಡುತ್ತೀಯಾ” ಎಂದು ಜಗಳ ಆರಂಭಿಸಿ, ಪಿರ್ಯಾದಿದಾರರ ಜೊತೆಯಲ್ಲಿದ್ದ ಆಪ್ರಾಜ್ಗೆ ಕೆನ್ನೆಗೆ ಹೊಡೆದಿದ್ದಲ್ಲದೆ, ತಬ್ಕೆ ಸಮ್ರಾನ್ ಅವರ ಕುತ್ತಿಗೆ ಹಿಡಿದು ಅಲ್ಲಿದ್ದ ಒಣ ಕಟ್ಟಿಗೆಯಿಂದ ತಲೆಗೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಜೀವ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಲಾಗಿದೆ.
ಹಲ್ಲೆಯಿಂದ ಗಾಯಗೊಂಡ ತಬ್ಕೆ ಸಮ್ರಾನ್ ಅವರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.





